ಇಲ್ಲಿನ ಶಿರವಾಡದಲ್ಲಿರುವ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶುಕ್ರವಾರ ನಸುಕಿನ ಜಾವ ಬೆಂಕಿ ಅವಘಡ ಸಂಭವಿಸಿದೆ. ಪ್ಲಾಸ್ಟಿಕ್ ಸೇರಿದಂತೆ ಘನ ತ್ಯಾಜ್ಯಗಳನ್ನು ವಿಲೇವಾರಿಗೆ ದಾಸ್ತಾನು ಮಾಡಿದ್ದ ಪ್ರದೇಶಕ್ಕೆ ಬೆಂಕಿ ಆವರಿಸಿದೆ. ನಸುಕಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿ ತಿಳಿಸಿದ್ದಾರೆ. ಹತ್ತಾರು ಟನ್ ತ್ಯಾಜ್ಯ ದಾಸ್ತಾನು ಇದ್ದ ಜಾಗದಲ್ಲಿ ಬೆಂಕಿ ಆವರಿಸಿದೆ. ಬೆಂಕಿ ನಂದಿಸಲು ಕಾರವಾರ, ಅಂಕೋಲಾ, ಬಿಣಗಾದಲ್ಲಿರುವ ಬಿರ್ಲಾ ಗ್ರಾಸಿಮ್ ಇಂಡಸ್ಟ್ರೀಸ್ನ ಅಗ್ನಿನಂದಕ ವಾಹನಗಳು ಸತತ ನಾಲ್ಕು ಗಂಟೆಯಿಂದ ಕಾರ್ಯಾಚರಣೆ ನಡೆಸುತ್ತಿವೆ. ‘ಅವಘಡದಲ್ಲಿ ಘಟಕದಲ್ಲಿರುವ ಯಂತ್ರೋಪಕರಣ, ಶೆಡ್ಗಳಿಗೆ ಯಾವುದೇ ಹಾನಿ ಆಗಿಲ್ಲ. ಆದರೆ, ಕಸದ ರಾಶಿ ಸುಟ್ಟು ಬೂದಿಯಾಗಿದೆ. ಉಳಿದ ಕಸದ ರಾಶಿಗೆ ಬೆಂಕಿ ತಗುಲದಂತೆ ಮುನ್ನೆಚ್ಚರಿಕೆ ವಹಿಸುವ ಕೆಲಸ ನಡೆದಿದೆ’ ಎಂದು ನಗರಸಭೆಯ ಪರಿಸರ ಎಂಜಿನಿಯರ್ ಸುನೀಲ ಗಾವಡೆ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

