ಹುಬ್ಬಳ್ಳಿ: ಸ್ನಾನ ಮಾಡುತ್ತಿದ್ದಾಗ ಮಹಿಳೆಯೊಬ್ಬರ ಫೋಟೊ ತೆಗೆದು, ವಿಡಿಯೊ ಮಾಡಿಕೊಂಡು ಕಿರುಕುಳ ನೀಡಿದ್ದಲ್ಲದೆ, ಅವರಿಂದ ₹17 ಲಕ್ಷ ವಸೂಲಿ ಮಾಡಿದ್ದರಿಂದ, ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಉಣಕಲ್ನಲ್ಲಿ ನಡೆದಿದೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಧಾ ಹನಸಿ (42) ಆತ್ಮಹತ್ಯೆ ಮಾಡಿಕೊಂಡವರು. ಸಿದ್ಧಾರೂಢ, ಅರುಣ, ಮೀನಾಕ್ಷಿ, ಮಲ್ಲಿಕಾರ್ಜುನ, ಈರಪ್ಪ, ಪ್ರಕಾಶ, ಬಸಲಿಂಗಪ್ಪ, ಶಿವಾನಂದ, ಗಿರಿಜಾ, ಮಲ್ಲಿಕಾರ್ಜುನ ವಿರುದ್ಧ ಸುಧಾ ಅವರ ಪತಿ ಮಂಜುನಾಥ ಅವರು ದೂರು ನೀಡಿದ್ದಾರೆ. ಸುಧಾ ಅವರು ಸವದತ್ತಿಯ ಮುನವಳ್ಳಿಯವರಾಗಿದ್ದು, ಸದ್ಯ ಉಣಕಲ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ಆರೋಪಿ ಸಿದ್ಧಾರೂಢ ಎರಡು ವರ್ಷಗಳ ಹಿಂದೆ ಮಹಿಳೆ ಸ್ನಾನ ಮಾಡುತ್ತಿದ್ದಾಗ ವಿಡಿಯೊ ಮಾಡಿ, ಬೆದರಿಸಿ ಹಣ ವಸೂಲಿ ಮಾಡಿದ್ದ. ಅವರ ಜತೆ ಉಳಿದ ಆರೋಪಿಗಳು ಸೇರಿ ಸವದತ್ತಿ ಕೋರ್ಟ್ನಲ್ಲಿ ಚೆಕ್ಬೌನ್ಸ್ ಪ್ರಕರಣ ದಾಖಲಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದರು. ಇದರಿಂದ ಮಾನಸಿಕವಾಗಿ ನೊಂದು ಜೂನ್ 4ರಂದು ಉಣಕಲ್ನ ಬಾಡಿಗೆ ಮನೆಯಲ್ಲಿ ಸುಧಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

