ಹುಣಸೂರು: ಕಾಡಿನಿಂದ ಜಿಂಕೆ ಮರಿಗಳನ್ನು ತಂದು ಮನೆಯಲ್ಲಿ ಸಾಕಿದ್ದ ಆರೋಪದ ಮೇಲೆ ನಾಗರಹೊಳೆ ವನ್ಯಜೀವಿ ವಲಯದ ಬೀಟ್ ಗಾರ್ಡ್ ಪೊನ್ನಪ್ಪ ಅಲಿಯಾಸ್ ನವೀನ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ವಿಜಿಲೆನ್ಸ್, ಜಾಗೃತ ದಳ ಹಾಗೂ ಸ್ಥಳೀಯ ಅರಣ್ಯಾಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಆರೋಪಿಯು ಕೆಲ ತಿಂಗಳ ಹಿಂದೆ ಎರಡು ಜಿಂಕೆ ಮರಿಗಳನ್ನು ಮನೆಗೆ ತಂದಿದ್ದು, ಅವುಗಳಲ್ಲಿ ಒಂದನ್ನು ಕೊಂದು ಅದರ ಮಾಂಸವನ್ನು ಸೇವಿಸಿ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಹಂಚಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ದಾಳಿ ವೇಳೆ ಮನೆಯ ಕೊಟ್ಟಿಗೆಯಲ್ಲಿ ಜೀವಂತ ಜಿಂಕೆ ಹಾಗೂ ಅಕ್ರಮ ಬಂದೂಕು ಪತ್ತೆಯಾಗಿದೆ. ವಿಚಾರಣೆ ವೇಳೆ ಜಿಂಕೆಗೆ ಗಾಯವಾಗಿದ್ದ ಕಾರಣ ಚಿಕಿತ್ಸೆ ನೀಡುತ್ತಿದ್ದೆ ಎಂದು ಆರೋಪಿ ಹೇಳಿದ್ದಾನೆ. ಆದರೆ ಇಲಾಖೆಗೆ ಮಾಹಿತಿ ನೀಡದ ಕಾರಣ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಕ್ಷಿಸಲಾದ ಜಿಂಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

