ಹುಬ್ಬಳ್ಳಿ: ಧಾರವಾಡ ಸ್ಮಾರ್ಟ್ ಸಿಟಿ ನಗರ ಎಂದು ಬಾಯಿ ಮಾತುಗಳಲ್ಲಿ ಹೇಳೊದು ಆಯ್ತು. ಯಾಕೆಂದರೆ ಅವಳಿನಗರ ಅಕ್ಷರಶಃ ಸಮಸ್ಯೆಗಳ ಸರಮಾಲೆಯಲ್ಲಿ ನರಳುತ್ತಿದೆ. ಅವಳಿನಗರದಲ್ಲಿರುವ ಬಹುತೇಕ ಒಳಚರಂಡಿಗಳು ನಿರ್ವಹಣೆ ಇಲ್ಲದೇ ಹದಗೆಟ್ಟ ಹೋಗಿದ್ದು ಒಳಚರಂಡಿ ನೀರು ತುಂಬಿ ರಸ್ತೆಗೆ ಬರುತ್ತಿದ್ದು, ಇದರಿಂದ ಸಾರ್ವಜನಿಕರು ಪ್ರತಿನಿತ್ಯ ಪರಿಪಾಟಲು ಅನುಭವಿಸುವಂತಾಗಿದ್ದು ಪಾಲಿಕೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಇನ್ನೂ ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯ, ನಾವಿರುವುದು ನಿಮ್ಮ ಸೇವೆಗಾಗಿ ಎಂಬ ತನ್ನ ಧ್ಯೇಯವಾಕ್ಯ ಕೇವಲ ಬಾಯಿ ಮಾತಾಗಿ ಉಳಿದಂತಾಗಿದೆ. ಅವಳಿನಗರದ ಬಹುತೇಕ ಕಡೆಯ ಮ್ಯಾನ ಹೋಲ್ ಗಳ ಮೇಲಿನ ಹೊದಿಕೆ ಒಡೆದು ಹೋಗಿದ್ದು, ಕೊಳಚೆ ನೀರೆಲ್ಲಾ ರಸ್ತೆ ಮೇಲೆ ಹರಿಯುವಂತಾಗಿದೆ. ಇಲ್ಲಿನ ಮಾದವಪುರದ ಸಿಟಿ ಕ್ಲಿನಿಕ್ ನ ಪಕ್ಕದ ಮ್ಯಾನ್ ಹೊಲ್ ಒಡೆದು ಎಷ್ಟೋ ದಿನಗಳು ಕಳೆದರು ಅದನ್ನು ಸರಿಮಾಡುವ ಕಾರ್ಯಕ್ಕೆ ಯಾರು ಮುಂದಾಗಿಲ್ಲ. ಪರಿಣಾಮ ಚರಂಡಿ ತುಂಬಿ ಗಲೀಜು ನೀರು ರಸ್ತೆ ಮೇಲೆಯೇ ಹರಿಯುವಂತಾಗಿದೆ. ಇದರಿಂದ ಸುತ್ತಲೂ ಗಬ್ಬೆದ್ದು ನಾರುತ್ತಿದೆ. ಚರಂಡಿಯ ಕಲ್ಮಶ ರಸ್ತೆ ಮೇಲೆ ಹರಿದು ಪಾದಾಚಾರಿಗಳು, ವಾಹನ ಸವಾರರಿಗೆ ಕಿರಿಕಿರಿಯಾಗುವಂತಾಗಿದೆ. ಇನ್ನೂ ಪಕ್ಕದಲ್ಲೇ ಆಸ್ಪತ್ರೆ ಇರುವ ಕಾರಣ ದಿನನಿತ್ಯ ಸಾವಿರಾರು ರೋಗಿಗಳು ತಮ್ಮ ರೋಗಗಳ ಚಿಕಿತ್ಸೆಗೆ ಬರುವರು. ಆದರೆ ಈ ಚರಂಡಿಯಿಂದಾಗಿ ಹೋಗುವಾಗ ಮತಷ್ಟು ರೋಗಗಳನ್ನು ಬಳುವಳಿಯಾಗಿ ತೆಗೆದುಕೊಂಡು ಹೋಗುವಂತಾಗಿದೆ. ಇನ್ನೂ ನಗರದಲ್ಲಿ ಇಷ್ಟೇಲ್ಲಾ ಸಮಸ್ಯೆಗಳಾಗುತ್ತಿದ್ದರು ಪಾಲಿಕೆ ಮಾತ್ರ ಇತ್ತ ತಿರುಗಿ ಕೂಡ ನೋಡದಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ. ಅಧಿಕಾರಿಗಳ ಕೆಲಸಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಈ ಸಮಸ್ಯೆ ಬಗೆಹರಿಸುವಂತೆ ಈಗಾಗಲೇ ಸ್ಥಳೀಯರು ಪಾಲಿಕೆ ಸಿಬ್ಬಂದಿಗೆ ಮನವಿ ಮಾಡಿದರೂ ಸಮಸ್ಯೆ ಮಾತ್ರ ನಿವಾರಣೆ ಆಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಜನರು ದಿನನಿತ್ಯ ಚರಂಡಿ ನೀರನ್ನೇ ತುಳಿದು ದಾಟುವಂತಾಗಿದೆ. ಪಾಲಿಕೆ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





