ಹುಬ್ಬಳ್ಳಿ: ಧಾರವಾಡ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜು.28ರ ರವಿವಾರ ಹಾಗೂ 29ರ ಸೋಮವಾರ ನಗರದ ಇಂದಿರಾ ಗಾಜಿನ ಆವರಣ ಹತ್ತಿರದ ಆರ್.ಎನ್.ಶೆಟ್ಟಿ ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸಮ್ಮೇಳನದ ದ್ವಾರಕ್ಕೆ ಡಾ.ಗಂಗೂಬಾಯಿ ಹಾನಗಲ್, ಸಭಾಂಗಣಕ್ಕೆ ನಿರಂಜನ ವಾಲಿಶೆಟ್ಟರ ಹಾಗೂ ವೇದಿಕೆಗೆ ಡಾ.ಗಿರೀಶ ಕಾರ್ನಾಡ ಹೆಸರಿಡಲಾಗಿದ್ದು, ಸಮ್ಮೇಳ ನದ ಸರ್ವಾಧ್ಯಕ್ಷರಾಗಿ ಡಾ.ಬಸವರಾಜ ಸಾದರ ಪಾಲ್ಗೊಳ್ಳಲಿದ್ದಾರೆ. 28ರಂದು ಬೆಳಿಗ್ಗೆ 8-30ಕ್ಕೆ ರಾಷ್ಟ್ರ ಧ್ವಜಾರೋಹಣವನ್ನು ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಪರಿಷತ್ ಧ್ವಜಾರೋಹಣವನ್ನು ಡಾ.ಲಿಂಗರಾಜ ಅಂಗಡಿ ಹಾಗೂ ಕನ್ನಡ ಧ್ವಜಾರೋಹಣವನ್ನು ಅವ್ವಾ ಟ್ರಸ್ಟ್ನ ಕಾರ್ಯದರ್ಶಿ ಶಶಿ ಸಾಲಿ ನೆರವೇರಿಸಲಿದ್ದಾರೆ ಎಂದರು.ಬಳಿಕ ಬೆಳಿಗ್ಗೆ 10-30ಕ್ಕೆ ಹುಬ್ಬಳ್ಳಿ ಎಸ್ಜೆಎಂವಿಎಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಯರು ಹಾಡುವ ನಾಡಗೀತೆಯೊಂದಿಗೆ ಆರಂಭಗೊಳ್ಳುವ ಸಮ್ಮೇಳನವನ್ನು ಕಸಾಪ ರಾಜ್ಯಾಧ್ಯಕ್ಷ, ನಾಡೋಜ ಡಾ.ಮನು ಬಳಿಗಾರ ಉದ್ಘಾಟಿಸಲಿದ್ದು, ಮಾಜಿ ಸಿಎಂ ಜಗದೀಶ ಶೆಟ್ಟರ ಅಧ್ಯಕ್ಷತೆ ವಹಿಸುವರು. ನಿಕಟಪೂರ್ವ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ, ಸಮ್ಮೇಳನ ಸರ್ವಾಧ್ಯಕ್ಷ ಡಾ.ಬಸವರಾಜ ಸಾದರ ಮಾತನಾಡಲಿದ್ದು, ಸಾಹಿತಿ ಡಾ.ಜಿ.ಎಂ.ಹೆಗಡೆ ಆಶಯ ನುಡಿ ಹೇಳಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಪುಸ್ತಕಗಳನ್ನು ಬಿಡುಗಡೆಗೊಳಿ ಸಲಿದ್ದು, ಪುಸ್ತಕ ಮಳಿಗೆಗಳನ್ನು ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮತ್ತು ಚಿತ್ರಕಲಾ ಪ್ರದರ್ಶನವನ್ನು ಮಾಜಿ ಶಾಸಕ ಎನ್.ಎಚ್.ಕೊನರೆಡ್ಡಿ ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.ಉದ್ಗಾಟನೆ ಬಳಿಕ ಅಪರಾಹ್ನ 12-30ಕ್ಕೆ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಸಾಹಿತಿಗಳ ಪಾತ್ರ,, ಮಧ್ಯಾಹ್ನ 3ಗಂಟೆಗೆ ವಚನಕ್ರಾಂತಿಯ ವಿಭಿನ್ನ ನೆಲೆಗಳು ಮತ್ತು ಪ್ರಸ್ತುತತೆ, ಸಂಜೆ 4-30ಕ್ಕೆ ಮಾಧ್ಯಮೋದ್ಯಮ ಸಾಮಾಜಿಕ ಜವಾಬ್ದಾರಿ ವಿಷಯದ ಕುರಿತು ಗೋಷ್ಠಿಗಳು ಜರುಗಲಿದ್ದು, ವಿವಿಧ ವಿಷಯ ತಜ್ಞರು ಭಾಗವಹಿಸಲಿದ್ದಾರೆ. ಸಂಜೆ 6-30ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕನ್ನಡ ಜಾನಪದ ಪರಿಷತ್ನ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಚಾಲನೆ ನೀಡಲಿದ್ದು, ವಿವಿಧ ಕಲಾತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.29ರಂದು ಬೆಳಿಗ್ಗೆ 10ಕ್ಕೆ ವರ್ತಮಾನ ಸಾಹಿತ್ಯಾವಲೋಕನ, ಅಪರಾಹ್ನ 12ಕ್ಕೆ ಬಂಡಾಯ ದಲಿತ ಮಹಿಳಾ ಸಾಹಿತ್ಯದಲ್ಲಿ ರಾಷ್ಟ್ರೀಯ ಪ್ರಜ್ಞೆ ವಿಷಯದ ಕುರಿತು ಗೋಷ್ಠಿಗಳು ನಡೆಯಲಿದ್ದು, ಮಧ್ಯಾಹ್ನ 2-30ಕ್ಕೆ ಇಂದಿನ ಯುವಕರ ಒಲವು-ನಿಲುವು ಕುರಿತ ಉಪನ್ಯಾಸ, 3-30ಕ್ಕೆ ಕವಿಗೋಷ್ಠಿ, ಸಂಜೆ 5ಗಂಟೆಗೆ ಸಮ್ಮೇಳನಾಧ್ಯಕ್ಷರ ಗೀತೆಗಳ ವಾಚನ ಮತ್ತು ಗಾಯನ, 5-30ಕ್ಕೆ ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ, 6-30ಕ್ಕೆ ಬಹಿರಂಗ ಅಧಿವೇಶನ ಜರುಗಲಿದೆ ಎಂದರು.ಅಂದು ಸಂಜೆ 7ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಾಡೋಜ ಡಾ.ಪಾಟೀಲ ಪುಟ್ಟಪ್ಪ ವಹಿಸಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಸಮಾರೋಪ ಭಾಷಣ ಮಾಡಲಿದ್ದು, ಬೆಂಗಳೂರು ಆಕಾಶವಾಣಿ ನಿವೃತ್ತ ನಿರ್ದೇಶಕ ಡಾ.ಬಸವರಾಜ ಸಾದರ ಸಮ್ಮೇಳನಾ ಧ್ಯಕ್ಷರ ನುಡಿಗಳನ್ನು ಹೇಳಲಿದ್ದಾರೆ. ವಿವಿಧ ಗಣ್ಯರು ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಚನ್ನಬಸಪ್ಪ ಧಾರವಾಡಶೆಟ್ಟರ, ಮಹೇಶ ಪತ್ತಾರ, ಮೃತ್ಯುಂಜಯ ಮಟ್ಟಿ, ಕೆ.ಎಸ್.ಕೌಜಲಗಿ, ಸಂಧ್ಯಾ ದಿಕ್ಷೀತ ಸೇರಿದಂತೆ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





