ಸಾಮಾನ್ಯವಾಗಿ ರಾಜ್ಯದಲ್ಲಿ ಯಾವ ಸರ್ಕಾರ ಆಡಳಿತದಲ್ಲಿರುತ್ತದೆಯೋ ಅದರ ಪರ ಸ್ಥಳೀಯ ಸಂಸ್ಥೆಗಳು ಹೋಗುವುದು ವಾಡಿಕೆ. ಕೆಲಸಗಳು ಮತ್ತು ದುಡ್ಡು ಬಿಡುಗಡೆಯಾಗುವ ಉದ್ದೇಶದಿಂದ ಹೀಗೆ ಆಗುವುದು ಸಾಮಾನ್ಯ ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡದ ಎಪಿಎಂಸಿಯಲ್ಲಿ ಹೆಸರು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾವು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪಿಂಚಣಿ ಹಣ ಬಿಡುಗಡೆಗೆ ಆಗ್ರಹಿಸಿ ಧರಣಿ ನಡೆಸುತ್ತಿರುವಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೋಶಿ ಮತ್ತು ಶೆಟ್ಟರ್ಗೆ ಮಾಡಲು ಕೆಲಸವಿಲ್ಲ, ಧರಣಿ ಕೂತಿದ್ದಾರೆ. ಅವರ ಮುಖದ ಮೇಲೆ ದುಡ್ಡು ಎಸಿತೀನಿ ಎಂದಿದ್ದರು. ಆದರೆ, ಇದುವರೆಗೂ ನನ್ನ ಮುಖದ ಮೇಲೆ ಒಂದೇ ಒಂದು ನೋಟು ಬಂದು ಬಿದ್ದಿಲ್ಲ ಎಂದರು.
ಜನರಿಗೆ ಈ ಸರ್ಕಾರ ಬಹಳ ದಿನ ಇರುತ್ತೆ ಎನ್ನುವ ನಂಬಿಕೆ ಇಲ್ಲ. ರಾಜ್ಯ ಸರ್ಕಾರದ ಆರ್ಥಿಕ ಶಿಸ್ತು ಹಳ್ಳ ಹಿಡಿದಿದೆ. ಸರ್ಕಾರ ದಿವಾಳಿ ಅಂಚಿನಲ್ಲಿರುವ ಕಾರಣ ಚೆಕ್ಗಳು ಬೌನ್ಸ್ ಆಗುತ್ತಿವೆ. ಭಾಗ್ಯಲಕ್ಷ್ಮೀ, ವೃದ್ಧಾಪ್ಯ ವೇತನ ಸಕಾಲಕ್ಕೆ ಆಗುತ್ತಿಲ್ಲ. ಹೀಗೆ ಅನೇಕ ಯೋಜನೆಗಳಿಗೆ ಹಣ ಸಂದಾಯವಾಗುತ್ತಿಲ್ಲ ಎಂದರು.
ಸಾಲ ಮಾಡಿಯಾದರು ತುಪ್ಪ ತಿನ್ನು ಎನ್ನುವ ಗಾದೆ ಮಾತಿನಂತೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಸಿಕ್ಕಾಪಟ್ಟೆ ಸಾಲ ಮಾಡಿದ್ದಾರೆ. ಮುಂದಂತೂ ನಾವು ಬರಲ್ಲ ಎಂದು ಗೊತ್ತಾಗಿ ತಿಂದುಂಡು ಮಜಾ ಮಾಡುತ್ತಿದ್ದಾರೆ ಎಂದರು.
ಈ ಹಿಂದೆ ಜಗದೀಶ್ ಶೆಟ್ಟರ್ ಅವರು ಸರ್ಕಾರದ ಜೊತೆ ಮಾತನಾಡಿ, ಕಂದಾಯ ಇಲಾಖೆಗೆ 30 ಕೋಟಿ ಬಿಡುಗಡೆ ಮಾಡಿಸಿದ್ದರು. ಇದುವರೆಗೂ ಒಂದು ರೂ. ಬಂದಿಲ್ಲ. ಭ್ರಷ್ಟಾಚಾರದಿಂದ ಇವತ್ತು ಸರ್ಕಾರ ದಿವಾಳಿ ಅಂಚಿನಲ್ಲಿ ಬಂದಿದೆ. ಎಲ್ಲ ರಾಜ್ಯ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಇವರ್ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಪ್ರಹ್ಲಾದ್ ಜೋಶಿ, ಧಾರವಾಡ ಬಿಜೆಪಿ ಸಂಸದ
bigtvnews | Hubli Dharwad News | Kannada News | Karnataka News Hubli News | News In Hubli | Local news





