ದಾವಣಗೆರೆ: ಮದ್ಯವ್ಯಸನಿ ಒಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿರೋ ಪ್ರಕರಣ ನಗರದ ಹದಡಿ ರೋಡ್ ಬಳಿ ನಡೆದಿದೆ. ಎಎಸ್ಐ ಅಂಜಿನಪ್ಪ ಹಾಗೂ ಪೇದೆ ಸಿದ್ದೇಶ್ ಅವರು ಹದಡಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ರುದ್ರೇಶ್ ಎಂಬುವವರು ಮದ್ಯ ಸೇವನೆ ಮಾಡಿ, ಹೆಲ್ಮಟ್ ಧರಿಸದೆ ಗಾಡಿ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಎಎಸ್ಐ ಅಂಜಿನಪ್ಪ ಹಾಗೂ ಪೇದೆ ಸಿದ್ದೇಶ್ ಅವರು ರುದ್ರೇಶ್ ಅವರ ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಇದರಿಂದ ಕುಪಿತಗೊಂಡ ರುದ್ರೇಶ್ ರಸ್ತೆ ಬದಿಯಲ್ಲಿ ಮಾರಾಟಕ್ಕಿಟ್ಟ ಮಡಕೆಗಳಿಂದ ಪೊಲೀಸರ ಮೆಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಘಟನೆ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ರುದ್ರೇಶ್ ಪೊಲೀಸರ ಮೇಲೆ ಮಡಕೆಯಿಂದ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ, ಅವರನ್ನು ಬೆನ್ನತ್ತಿ ಎದೆ ಮೇಲಿನ ಅಂಗಿ ಹಿಡಿದೂ ಎಳೆದಾಡಿದ್ದಾರೆ, ನೂಕಾಟ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಜೊತೆಗೆ, ರೋಡಲ್ಲಿ ಪೊಲೀಸ್ ಅಧಿಕಾರಿಯನ್ನು ಕೆಳಕ್ಕೆ ಕೆಡವಿ, ತಾನೂ ಬಿದ್ದು ದೊಡ್ಡ ಸೀನ್ ಅನ್ನೇ ಕ್ರಿಯೇಟ್ ಮಾಡಿದ್ದಾರೆ. ಘಟನೆಗೆ ಸಂಬಂಧ ಪಟ್ಟಂತೆ ಕೆಟಿಜೆ ನಗರ ಪೊಲೀಸರು, ಸಿದ್ದರಾಮೇಶ್ವರ್ ಬಡಾವಣೆಯ ರುದ್ರೇಶ್ರನ್ನು ಬಂಧಿಸಿದ್ದು, ಆರೋಪಿ ಮೇಲೆ ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ಹಿನ್ನೆಲೆಯಲ್ಲಿ ಸೆಕ್ಷನ್ 353, 333 ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸುವ ಸಾಧ್ಯತೆ ಇದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





