ನವದೆಹಲಿ: ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ಮಧ್ಯೆ ನಡೆದ ಗಲಾಟೆಗೆ ಸಂಬಂಧಿಸಿ ಯುವತಿಯೊಬ್ಬಳಿಗೆ ಗನ್ ತೋರಿಸಿ ಬೆದರಿಕೆ ಒಡ್ಡಿದ ಬಿಎಸ್ಪಿಯ ಮಾಜಿ ಸಂಸದರ ಪುತ್ರನ ಹುಡುಕಾಟದಲ್ಲಿ ತೊಡಗಿರುವ ಪೊಲೀಸರು ಲಖನೌದಲ್ಲಿ ತನಿಖೆ ಮುಂದುವರಿಸಿದ್ದಾರೆ. ಅಲ್ಲದೇ ಆರೋಪಿ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆ ಎಲ್ಲಾ ವಿಮಾನ ನಿಲ್ದಾಣಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ.ಕಳೆದ ಭಾನುವಾರ ದೆಹಲಿಯ ಪಂಚತಾರಾ ಹೋಟೆಲ್ನಲ್ಲಿ ಈ ಘಟನೆ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಾಗದ ಹಿನ್ನೆಲೆ ಕೃತ್ಯದ ಕುರಿತು ನಿರ್ಲಕ್ಷ್ಯ ತೋರಿದಕ್ಕೆ ಪಂಚತಾರಾ ಹೋಟೆಲ್ಗೆ ಕೂಡ ಪೊಲೀಸರು ಶೋಕಾಸ್ ನೋಟಿಸ್ ನೀಡಿದ್ದಾರೆ.ಇನ್ನು ಆರೋಪಿ ಆಶಿಶ್ ಪಾಂಡೆಯ ಮನೆ ಸೇರಿದಂತೆ, ಆತನ ಸಂಬಂಧಿಕರ ಮನೆಯಲ್ಲಿಯೂ ಹುಡುಕಿದರೂ ಎಲ್ಲೂ ಆತ ಪತ್ತೆ ಆಗಿಲ್ಲ. ಈ ಹಿನ್ನೆಲೆ ಆರೋಪಿ ಪ್ರಭಾವಿ ರಾಜಕಾರಣಿಯ ಪುತ್ರ ಆಗಿರುವುದರಿಂದ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಯಿದ್ದು, ದೆಹಲಿ ಪೊಲೀಸರು ವಿಮಾನ ನಿಲ್ದಾಣಗಳಿಗೆ ಆರೋಪಿಯ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.ಈ ಸಂಬಂಧ ಹೇಳಿಕೆ ನೀಡಿರುವ ದೆಹಲಿಯ ಜಂಟಿ ಪೊಲೀಸ್ ಆಯುಕ್ತರಾದ ಅಜಯ್ ಚೌಧರಿ, ಆಶಿಶ್ ಪಾಂಡೆ ಪ್ರಭಾವಿ ರಾಜಕಾರಣಿಯ ಮಗನಾಗಿರೋದ್ರಿಂದ, ಆತ ದೇಶ ಬಿಡುವ ಎಲ್ಲಾ ಸಾಧ್ಯತೆ ಇದೆ. ಈ ಹಿನ್ನೆಲೆ ದೇಶದಾದ್ಯಂತ ವಿಮಾನ ನಿಲ್ದಾಣಗಳ ಮೇಲೆ ಕಣ್ಗಾವಲಿಟ್ಟಿದ್ದೇವೆ ಎಂದಿದ್ದಾರೆ. ಅಲ್ಲದೇ ಆತ ಲಖನೌನಲ್ಲಿ ವಾಸಿಸುವುದರಿಂದ ಉತ್ತರಪ್ರದೇಶ ಪೊಲೀಸರ ಸಹಕಾರವನ್ನು ಕೇಳಿದ್ದೇವೆ. ಶೀಘ್ರದಲ್ಲೇ ಆರೋಪಿಯನ್ನ ಬಂಧಿಸುತ್ತೇವೆ ಎಂದಿದ್ದಾರೆ.ಸದ್ಯ ಆರೋಪಿ ಆಶಿಶ್ ವಿರುದ್ಧ ಐಪಿಸಿ ಸೆಕ್ಷನ್ 323, 506 ಮತ್ತು 354ರ ಪ್ರಕಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೇ ಸಚಿವ ಕಿರಣ್ ರಿಜಿಜು, ಆರೋಪಿ ಸೇರಿದಂತೆ ಆತನ ಸ್ನೇಹಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟ್ವಿಟರ್ನಲ್ಲಿ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





