ಮಹಾರಾಷ್ಟ್ರ: ಬಾವಿಯನ್ನ ಸ್ವಚ್ಛಗೊಳಿಸಲು ಇಳಿದಿದ್ದ ಕಾರ್ಮಿಕ ಸೇರಿದಂತೆ ಐವರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಬಾವಿಯೊಳಗಿದ್ದ ಕಸ ಕಡ್ಡಿ ತೆಗೆಯಲು ಇಳಿದಿದ್ದ ಕಾರ್ಮಿಕ ಉಸಿರುಗಟ್ಟಿ ಬಾವಿಯೊಳಗೆ ಸಾವನಪ್ಪಿದ್ದಾನೆ. ಬಳಿಕ ಆತನ ಮೃತ ದೇಹ ತೆಗೆಯಲು ಬಾವಿಯೊಳಕ್ಕೆ ಇಳಿದಿದ್ದ ಇಬ್ಬರು ಟ್ರಸ್ಟಿಗಳು ಹಾಗೂ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಹ ಮೃತಪಟ್ಟಿದ್ದಾರೆ ಅಂತಾ ಮಹಾರಾಷ್ಟ್ರದ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ದಿಘಾವ್ಕರ್ ಹೇಳಿದ್ದಾರೆ. ಈಗಾಗಲೇ ಬಾವಿಯೊಳಗಿದ್ದ ನಾಲ್ವರ ಮೃತದೇಹಗಳನ್ನ ಹೊರತೆಗೆಯಲಾಗಿದೆ. ಬಾವಿಯ ನೀರನ್ನ ಪರೀಕ್ಷೆಗೊಳಪಡಿಸಿದ್ದು, ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಲ್ಫರ್ ಅಂಶ ಇರುವುದು ಪತ್ತೆಯಾಗಿದೆ. ಇನ್ನು ತುಂಬಾ ದಿನಗಳವರೆಗೆ ಬಾವಿಯನ್ನ ಮುಚ್ಚಿದ್ದರಿಂದ ಅದರೊಳಗೆ ಗ್ಯಾಸ್ ತುಂಬಿಕೊಂಡಿರುವ ಸಾಧ್ಯತೆ ಇದೆ ಅಂತಾ ಪ್ರತಾಪ್ ತಿಳಿಸಿದ್ದಾರೆ. ಬಾವಿಯಲ್ಲಿ ಮೃತಪಟ್ಟ ಕಾರ್ಮಿಕ ರಾಹುಲ್ ಗೋಸವಿ ಅಂತಾ ಗುರುತಿಸಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಪ್ರಮೋದ್ ಹಾಗೂ ಆನಂದ್ ಶೆಲಾರ್ ಅಂತಾ ತಿಳಿದುಬಂದಿದೆ. ನೀತಿವಾಲಿ ಪ್ರದೇಶದ ನಾಲ್ಲಾ ಬಳಿಯ ಈ ಬಾವಿ ನೀರನ್ನ ಸ್ಥಳೀಯರು ಕುಡಿಯಲು ಬಳಸುತ್ತಿದ್ದರು. ಕಳೆದ ಹಲವು ದಿನಗಳಿಂದ ಬಾವಿ ನೀರು ಕಲುಷಿತಗೊಂಡಿದ್ದರಿಂದ ಶುಚಿಕಾರ್ಯ ಕೈಗೊಳ್ಳಲಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





