ಹುಬ್ಬಳ್ಳಿ: ಕರ್ನಾಟಕ ಹೈಕೋರ್ಟ್ನ ತ್ರಿಸದಸ್ಯ ಪೀಠ ಮಾರ್ಚ್ 15 ರಂದು ಮಹತ್ವದ ತೀರ್ಪು ಪ್ರಕಟಿಸಿದೆ. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ. ಸರ್ಕಾರದ ವಸ್ತ್ರ ಸಂಹಿತೆ ಕಾನೂನು ಬದ್ಧ. ಸರ್ಕಾರದ ವಸ್ತ್ರ ಸಂಹಿತೆಯನ್ನ ಪ್ರಶ್ನೆ ಮಾಡುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆದ್ರೆ ಈ ತೀರ್ಪು ಕೆಲ ಮುಸ್ಲಿಂ ನಾಯಕರಿಗೆ, ವಿದ್ಯಾರ್ಥಿಗಳಿಗೆ, ಮುಖಂಡರಿಗೆ ಅಸಮಾಧಾನ ತಂದಿದೆ. ಸದ್ಯ ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ಹಿನ್ನೆಲೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದಲ್ಲಿ ಕೆಲ ಮುಸ್ಲಿಂ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ನಗರದ ಪ್ರಮುಖ ಮಾರುಕಟ್ಟೆಗಳಾದ ಶಾ ಬಜಾರ್, ನ್ಯಾಷನಲ್ ಮಾರುಕಟ್ಟೆ, ಹಳೇಹುಬ್ಬಳ್ಳಿ ಮಾರುಕಟ್ಟೆ, ಗಣೇಶ ಪೇಟೆ ಸೇರಿದಂತೆ ಮುಂತಾದ ಪ್ರಮುಖ ರಸ್ತೆಯಲ್ಲಿರುವ ಮುಸ್ಲಿಂ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿದ್ದಾರೆ. ಹುಬ್ಬಳ್ಳಿಯ ಹೃದಯ ಭಾಗ ಸಿಬಿಟಿ ಹತ್ತಿರದ ದುರ್ಗದ ಬಯಲು ಮಾರುಕಟ್ಟೆಯಲ್ಲಿ ಬಹುತೇಕ ಮುಸ್ಲಿಂ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು.