ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಇದೇ ದಿ. 5 ರಂದಿ ಎರಡು ವಾರಗಳ ಕಾಲ ಹೋರಾಟ ವೇದಿಕೆ ಧರಣಿ ಸತ್ಯಾಗ್ರಹ ಕೈಗೊಳ್ಳಲಿದೆ. ಸಮಯ ಪ್ರತಿ ದಿನ ಮುಂಜಾನೆ 10:00 ಗಂಟೆಯಿಂದ ಸಾಯಂಕಾಲ 6: ಗಂಟೆವರೆಗೆ. ಮಹಾನಗರ ಪಾಲಿಕೆ, ಧಾರವಾಡ ಕಚೇರಿ ಹತ್ತಿರ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಸಂಚಾಲಕರಾದ ಮನೋಜ ಪಾಟೀಲ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಧರಣಿ ಸತ್ಯಾಗ್ರಹ ನಡೆಸುವುದಕ್ಕೆ ನಗರದ ವಿವಿಧ ಬಡಾವಣೆಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಪ್ರತಿ ದಿನವೂ ಧರಣಿ ಕೈಕೊಳ್ಳಲು ವಿವಿಧ ಸಾಮಾಜಿಕ ಸಂಘಟನೆಗಳು ಮುಂದೆ ಬಂದಿವೆ. ಈ ಪೈಕಿ ಮೊದಲ ದಿನವಾದ ಏಪ್ರಿಲ್ 5 ರಂದು ಧಾರವಾಡ ಹುಬ್ಬಳ್ಳಿ ಮಹಾನಗರ ಸಮಗ್ರ ಅಭಿವೃದ್ಧಿ ಸಂಘ ಹಾಗೂ ಇನ್ನಿತರ ಸಂಘಟನೆಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಬರುವ ದಿನಗಳಲ್ಲಿ ಧಾರವಾಡದ ಕಲಾವಿದರು, ಸಾಹಿತಿಗಳು, ವಕೀಲರ ಸಂಘ, ಧಾರವಾಡ ಜಿಲ್ಲಾ ನಿವೃತ್ತರ ಸಂಘ, ವರ್ತಕರ ಸಂಘ, ವೈದ್ಯರ ಸಂಘ ಧರಣಿಗಳಲ್ಲಿ ಪಾಲ್ಗೊಳ್ಳಲು ಮುಂದೆ ಬಂದಿವೆ. ಇದರ ಜೊತೆಗೆ, ಧಾರವಾಡದ ಬಡಾವಣೆಗಳಾದ ಮಾಳಮಡ್ಡಿ ಸನ್ಮತಿನಗರ, ಸಾಧನಕೇರಿ, ತೇಜಸ್ವಿನಗರ, ನಾರಾಯಣಪುರ, ಚೆನ್ನಬಸವೇಶ್ವರನಗರ, ಶಿವಗಿರಿ, ಲಕ್ಷ್ಮೀನಗರ ಮತ್ತಿತರ ಪ್ರದೇಶಗಳ ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಮುಂದೆ ಬಂದಿದ್ದಾರೆ ಎಂದರು.
ಪ್ರಾರಂಭದ ದಿನವಾದ ಏಪ್ರಿಲ್ 5 ರಂದು ಧರಣಿ ಸತ್ಯಾಗ್ರಹದ ಉದ್ಘಾಟನೆಗಾಗಿ ಧಾರವಾಡದ ಇಬ್ಬರು ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಲೋಕಸಭಾ ಸದಸ್ಯರೂ ಆಗಿರುವ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರಿಗೆ ಮನವಿ ಮಾಡಲಾಗಿದೆ.
ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೆಂದು ಆಗ್ರಹಿಸಿ ಕಳೆದ ಎಂಟು ತಿಂಗಳುಗಳಿಂದ ಹೋರಾಟ ವೇದಿಕೆ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಧಾರವಾಡದ ಇಬ್ಬರು ಶಾಸಕರಿಗೆ ಮುಖತಃ ಭೇಟಿಮಾಡಿ ಮನವಿ ಮಾಡಿಕೊಳ್ಳಲಾಗಿದೆ. ಇದಲ್ಲದೆ ಗಣ್ಯ ಸಾಹಿತಿ ನಾಡೋಜ ದಿ. ಚೆನ್ನವೀರ ಕಣವಿ, ಡಾ. ಗುರುಲಿಂಗ ಕಾಪ್ಪ ಸೇರಿದಂತೆ ಅನೇಕ ಗಣ್ಯರ ಸಹಿಗಳು ಹಾಗೂ ಐದು ಸಹಸ್ರಕ್ಕೂ ಮಿಕ್ಕಿದೆ ನಾಗರಿಕರ ಸಹಿಯುಳ್ಳ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇಷ್ಟಾದರೂ ಸಹ ಶಾಸಕರು, ಸಚಿವರಿಂದ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಸ್ಪಷ್ಟ ಉತ್ತರ ಪ್ರತ್ಯೇಕ ಪಾಲಿಕೆ ಸ್ಥಾಪನೆ ಬಗ್ಗೆ ಬಾರದೇ ಇರುವುದು ಖಂಡನೀಯವಾಗಿದೆ. ಹೀಗಾಗಿ ಧರಣಿ ಸತ್ಯಾಗ್ರಹ ಮಾಡುವುದು ಅನಿವಾರ್ಯವಾಗಿದೆ.
ಧಾರವಾಡ ನಗರದ ವಿವಿಧ ಪ್ರದೇಶಗಳ ಬಣೆ ಶಲ್ಯರ್ಗಳ ಮೇಲೆ ಹುಬ್ಬಳ್ಳಿ ಧಾರವಾಡ ಎಮ್ಮಿಕೇರಿ, ಎಲ್.ಎ.ಸಿ. ವಿದ್ಯಾಗಿರಿ, ಹೀಗೆಲ್ಲ ಬರೆದಿದ್ದು ಖಂಡನೀಯ. ಇದನ್ನು ಹೋರಾಟ ವೇದಿಕೆ ಬಲವಾಗಿ ವಿರೋಧಿಸುವುದಲ್ಲದೆ ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಕೊಳ್ಳಬೇಕೆಂದು ಲಿಖಿತವಾಗಿ ಮಹಾನಗರ ಪಾಲಿಕೆ ಕಮೀಶನರ ಹಾಗೂ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಕೊಳ್ಳದೇ ಇರುವುದು ವಿಷಾದಕರ. ಈ ಬಗ್ಗೆ ಉಗ್ರ ಹೋರಾಟ ಕೈಕೊಳ್ಳುವ ಮೊದಲು ಅಧಿಕಾರಿಗಳು ಕೂಡಲೇ ಕ್ರಮವನ್ನು ಕೈಕೊಳ್ಳಬೇಕೆಂದು ಕೋರಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಎಮ್.ವಿ. ವಡ್ಡಿನ ಲಿಂಗರಾಜ ಸರದೇಸಾಯಿ,ವಂಕಟೇಶ ಮಾಚಕನೂರು, ರವೀಂದ್ರ ಆಕಳವಾಡಿ ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

