ಹುಬ್ಬಳ್ಳಿ: ಇಲ್ಲಿನ ಅರಳಿಕಟ್ಟಿ ಓಣಿಯ ಶ್ರೀ ಗ್ರಾಮದೇವತೆಗಳಾದ ಶ್ರೀ ದ್ಯಾಮವದೇವಿ ಹಾಗೂ ಶ್ರೀ ದುರ್ಗಮ್ಮದೇವಿ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮ ಏ.11 ರಿಂದ ಏ.15 ರವರೆಗೆ ನಡೆಯಲಿದೆ ಎಂದು ಪಾಲಿಕೆ ಸದಸ್ಯ ಶಿವು ಮೆನಸಿನಕಾಯಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಗ್ರಾಮ ದೇವತೆಗಳ ಶಕ್ತಿ ಹಾಗೂ ಪವಾಡಗಳು ಜನರಲ್ಲಿ ನಂಬಿಕೆಯನ್ನು ಮೂಡಿಸಿದೆ. ವಿಶೇಷವಾಗಿ ಆಷಾಢ ಮಾಸದಲ್ಲಿ ಹಾಗೂ ದಸರಾ ಹಬ್ಬದ ಸಂದರ್ಭದಲ್ಲಿ ಆದಿಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು, ಅದರಂತೆ ಅನ್ಯಧರ್ಮಿಯರು ಹಾಗೂ ಕರ್ನಾಟಕ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ವಿಶೇಷ ಪೂಜೆ ಹರಕೆಗಳನ್ನು ತೀರಿಸುವ ಮೂಲಕ ಭಕ್ತಿ ಮೆರೆಯುತ್ತಾರೆ. ಅದರಂತೆ ಇದೀಗ 25 ವರ್ಷಗಳ ನಂತರ ಅರಳಿಕಟ್ಟಿ ಓಣಿಯ ಭಕ್ತಾದಿಗಳು ಹಾಗೂ ಗುರು ಹಿರಿಯರು ಸೇರಿಕೊಂಡು ಜಾತ್ರಾ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಏ.11 ರಂದು ಬೆಳಿಗ್ಗೆ 7 ಕ್ಕೆ ಶ್ರೀ ದೇವಿಯ ಮೂಲ ಪಾದಗಟ್ಟಿ ಗಣೇಶಪೇಟೆಯಲ್ಲಿದ್ದು, ಈ ಕಾರಣ ಗ್ರಾಮದೇವತೆಗಳ ಮೂರ್ತಿಯ ನೇತ್ರ ಕಳೆ ಹಾಗೂ ಮಹಾಪೂಜೆಯನ್ನು ಆರಂಭಿಸಿ ಸುಮಂಗಲೆಯಿಂದ ಪೂರ್ಣಕುಂಭ ಮೇಳ ಮೂಲಕ ದೇವಿಯರ ಭವ್ಯ ಮೆರವಣಿಗೆ ಮಾಡಲಾಗುವುದು, ಅಂದು ಸಂಜೆ 6 ಕ್ಕೆ ಮಣಕವಾಡದ ಶ್ರೀ ಗುರು ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಪ್ರವಚನ ನೀಡಲಿದ್ದಾರೆ. ಅದರಂತೆ ಉಳಿದ ದಿನವು ವಿವಿಧ ಮಠಗಳ ಶ್ರೀಗಳಯ ಪ್ರವಚನ ನೀಡಲಿದ್ದು, ನಂತರ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕ ಪ್ರಸಾದ್ ಅಬ್ಬಯ್ಯ, ಅಮೃತ ದೇಸಾಯಿ, ಮಹೇಶ ತೆಂಗಿನಕಾಯಿ, ಪ್ರದೀಪ್ ಶೆಟ್ಟರ್ ಸೇರಿದಂತೆ ಮುಂತಾದ ಗಣ್ಯಮಾನ್ಯರು ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಗಿರೀಶ ಬಸವರಾಜ ತೆನ್ನಳ್ಳಿ, ಸಹ ಸಂಚಾಲಕರಾದ ವಿನಾಯಕ ಲದವಾ, ಬಸವರಾಜ ಸೇರಿದಂತೆ ಮುಂತಾದವರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

