ಬೆಂಗಳೂರು : ಪಿಎಸ್ಐ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪಾಲ್ ಬಂಧನದಿಂದ ಸರ್ಕಾರಕ್ಕೆ ಮುಜುಗರ ಆಗುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದನದಲ್ಲಿ ಉತ್ತರ ನೀಡುವ ವೇಳೆ ಆಗ ಸೂಕ್ತ ಸಾಕ್ಷ್ಯಾಧಾರ ಇರಲಿಲ್ಲ.ತಿದ್ದಿದ್ದ ಒಎಂಆರ್ ಶಿಟ್ ದೊರಕಿದ ತಕ್ಷಣ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉನ್ನತ ತನಿಖೆಗಾಗಿ ಸಿಐಡಿಗೆ ನೀಡಲಾಯಿತು. ಎರಡು ಗಂಟೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಯಿತು ಎಂದರು.
ಅತ್ಯಂತ ಪಾರದರ್ಶಕವಾಗಿ ವಿಚಾರಣೆಯಾಗಿದೆ. ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲದೆ ವಿಚಾರಣೆ ನಡೆದಿದೆ. ಪರೀಕ್ಷೆಯಲ್ಲಾಗುವ ಅಪರಾಧ ತಡೆಗಟ್ಟಲು ತನಿಖೆ ನಡೆಸಿ ಪ್ರಕರಣದ ರೂವಾರಿಗಳನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮದ ಬಗ್ಗೆ ಸಾಕ್ಷ್ಯಾಧಾರ ಸಿಕ್ಕಿದ ಬಳಿಕ ತನಿಖೆ ನಡೆದಿದ್ದು, ಹಲವರನ್ನು ಬಂಧಿಸಲಾಗಿದೆ. ಈಗ ಹಿರಿಯ ಪೊಲೀಸ್ ಅಧಿಕಾರಿ ಅಮೃತ್ ಪಾಲ್ ಬಂಧನವಾಗಿದೆ ಎಂದು ಹೇಳಿದರು. ವರ್ಷಗಟ್ಟಲೇ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತಿದ್ದಾರೆ. ಅವರ ಬಾಯಿಗೆ ಮಣ್ಣು ಹಾಕುವ ಕೆಲಸವನ್ನು ಮಾಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





