ಹುಬ್ಬಳ್ಳಿ : ಮಾಜಿ ಸಿಎಂ ಸಿದ್ಧರಾಮಯ್ಯ ವೀರ ಸಾವರ್ಕರ್ ವಿರುದ್ಧ ಹೇಳಿಕೆ ವಿಚಾರ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿದ್ಧರಾಮಯ್ಯ ಅವರು ಅಲ್ಪಸಂಖ್ಯಾತರನ್ನ ಓಲೈಸಲು ವೀರ ಸಾವರ್ಕರ್ ಅವರನ್ನ ಬಹಳ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಯಾವುದೋ ಒಂದು ಧರ್ಮದ ಬಗ್ಗೆ ವರ್ಗದ ಬಗ್ಗೆ ಇರುವ ಅತಿಯಾದ ಪ್ರೀತಿಯಿಂದಲೇ ವೀರ ಸಾವರ್ಕರ್ ಬಗ್ಗೆ ಈ ರೀತಿ ಮಾತನಾಡುವುದು ಶುರುವಾಗಿದೆ. ಅವರು ವೀರಸಾವರ್ಕರ್ ಅವರ ಇತಿಹಾಸವನ್ನ ತಿಳಿದುಕೊಳ್ಳಲಿ ಎಂದರು.
ವೀರವಸಾವರ್ಕರ್ ಕ್ರಾಂತಿಕಾರಿ ಹೋರಾಟ ಮಾಡಿದ್ದಕ್ಕೆ ಅವರಿಗೆ ಬ್ರಿಟಿಷರು ಶಿಕ್ಷೆ ನೀಡಿದ್ದರು. ಅವರು ಸ್ವತಂತ್ರಕ್ಕಾಗಿ ಹೋರಾಟ ಮಾಡಿದ್ದಾರೆ. ಅದರ ಬಗ್ಗೆ ಸಿದ್ಧರಾಮಯ್ಯ ಸರಿಯಾಗಿ ತಿಳಿದುಕೊಳ್ಳಲಿ. ಸಮಾಜದಲ್ಲಿ ದ್ವೇಷದ ವಾತಾವರಣ ನಿರ್ಮಾಣ ಮಾಡುವಂತ ಕೆಲಸವನ್ನ ನಿಲ್ಲಿಸಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿರುವುದನ್ನು ನಾನೂ ಸಹ ಖಂಡಿಸುತ್ತೇನೆ. ಯಾರೇ ಆಗಲಿ ಕಾನೂನು ಕೈಗೆ ತೆಗೆದುಕೊಳ್ಳೋ ಕೆಲಸ ಮಾಡಬಾರದು. ಮೊಟ್ಟೆ ಎಸೆದವರ ಬಗ್ಗೆ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಐದು ವರ್ಷ ಸಿಎಂ ಆದಂತವರು ಯಾವ ರೀತಿ ನಡೆದುಕೊಳ್ಳಬೇಕು ಅನ್ನೋದನ್ನ ತಿಳಿದುಕೊಳ್ಳಲಿ.
ಇದೇ ರೀತಿ ವರ್ತಿಸಿದ್ರೆ ಅವರ ಸಂಸ್ಕೃತಿಯನ್ನ ತೋರಿಸುತ್ತದೆ ಎಂದು ಜಗದೀಶ್ ಶೆಟ್ಟರ್ ಸಿದ್ಧರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ಸರ್ಕಾರ ನಮ್ಮದೇ ಎಂಬ ಸಿದ್ಧರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಜಗದೀಶ್ ಶೆಟ್ಟರ್, ಸಿದ್ಧರಾಮಯ್ಯ , ಡಿಕೆಶಿ ಕನಸು ಕಾಣುತ್ತಿದ್ದಾರೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಸೋಲಿನ ಭೀತಿಯಲ್ಲಿದೆ. ಪ್ರತಿಯೊಂದು ರಾಜ್ಯದಲ್ಲಿಯೂ ಅವರು ಅಧಿಕಾರ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿಯೂ ಕೂಡ ಅವರು ತಮ್ಮ ಅಸ್ತಿತ್ವ ಕಳೆದುಕೊಂಡಿದ್ದಾರೆ. ಹೀಗಾಗಿ ಹತಾಶೆಯಿಂದ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅತ್ಯಂತ ಶೋಚನೀಯ ಸ್ಥಿತಿ ಅನುಭವಿಸಲಿದೆ. ಅವರು ಎಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. 2023 ರಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.