ಧಾರವಾಡ: ಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಜ್ಜಾಗಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯದ ಏಳೆಂಟು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಕ್ಕಾಗಿ ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದನ್ನು ಶೀಘ್ರವೇ ಬಹಿರಂಗಪಡಿಸುವುದಾಗಿ ಪ್ರಮೋದ ಮುತಾಲಿಕ್ ಹೇಳಿದರು.
ಬೆಳಗಾವಿ ನಗರದ ಎರಡೂ ಕ್ಷೇತ್ರ, ತೇರದಾಳ, ಜಮಖಂಡಿ, ಕಾರ್ಕಳ, ಉಡುಪಿ, ಶೃಂಗೇರಿ, ಪುತ್ತೂರಿನಿಂದ ಸ್ಪರ್ಧೆ ಮಾಡುವುದಕ್ಕಾಗಿ ಕಾರ್ಯಕರ್ತರು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಬರುವ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದು ಖಚಿತ. ಯಾವ ಕ್ಷೇತ್ರ ಎನ್ನುವುದನ್ನೂ ಶೀಘ್ರ ಬಹಿರಂಗಪಡಿಸುತ್ತೇವೆ ಎಂದರು.
ಬಿಜೆಪಿಯಿಂದ ನನಗೆ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆಯಲಿಲ್ಲ. 2014ರಿಂದಲೂ ನಾನು ಬಿಜೆಪಿ ಮೇಲೆ ಆಸೆ ಇಟ್ಟಿದ್ದೆ. ಆದರೆ, ಅವರು ಸಕಾರಾತ್ಮಕವಾಗಿ ಸ್ಪಂದನೆ ನೀಡಲಿಲ್ಲ. ಇನ್ನು ಮೇಲೆ ಬಿಜೆಪಿಯವರು ಟಿಕೆಟ್ ಕೊಡಲು ಬಂದರೂ ನಾನು ಪಡೆದುಕೊಳ್ಳುವುದಿಲ್ಲ. ಸ್ವತಂತ್ರನಾಗಿ ಸ್ಪರ್ಧೆ ಮಾಡುತ್ತೇನೆ. ಹಿಂದೂ ಕಾರ್ಯಕರ್ತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ನೋಡಿ ಈ ತೀರ್ಮಾನಕ್ಕೆ ಬಂದಿದ್ದೇನೆ. ಕಾರ್ಯಕರ್ತರ ಆಸೆಯೂ ಇದೇ ಆಗಿದೆ ಎಂದರು.
ನಾನು ಕಟ್ಟರ್ ಹಿಂದೂ ಆಗಿರುವುದರಿಂದ ಕಾಂಗ್ರೆಸ್, ಜೆಡಿಎಸ್ನವರು ನನಗೆ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ. ನಾನು ಪಕ್ಷವನ್ನೂ ಕಟ್ಟುವುದಿಲ್ಲ. ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ನಾನು ಹಿಂದೂ ತತ್ವ ಸಿದ್ಧಾಂತದ ಮೇಲೆ ಇರುವ ಬಿಜೆಪಿಗೇ ಬೆಂಬಲ ಸೂಚಿಸುತ್ತೇನೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

