Breaking News

ಮುರುಘಾ ಶರಣರ ವಿರುದ್ಧ ಸುಳ್ಳು ಆರೋಪ : ಬಸವರಾಜೇಂದ್ರ ಪೋಲಿಸ್ ರ ವಶಕ್ಕೆ


ಚಿತ್ರದುರ್ಗ : ಮುರುಘಾ ಮಠದ ಮುರುಘಾ ಶರಣರ ವಿರುದ್ಧ ಸುಳ್ಳು ಆರೋಪ ಮಾಡುವಂತೆ ಬಾಲಕಿಯೊಬ್ಬಳ ಮೇಲೆ ಒತ್ತಡ ಹೇರಿದ ಆರೋಪಕ್ಕೆ ಸಂಬಂಧಿಸಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬಸವರಾಜೇಂದ್ರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಸವರಾಜೇಂದ್ರ ಮಠದಲ್ಲೇ ಶಿಕ್ಷಕನೆಂದು ಹೇಳಲಾಗುತ್ತಿದ್ದು, ಮಠದ ಹಾಸ್ಟೆಲ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳಿಗೆ ಕರೆ ಮಾಡಿ ಶ್ರೀಗಳ ವಿರುದ್ಧ ಸುಳ್ಳು ದೂರು ನೀಡುವಂತೆ ಬಗೆ ಬಗೆಯಲ್ಲಿ ಪ್ರಚೋದನೆ ನೀಡುತ್ತಿರುವ ಆಡಿಯೊವೊಂದು ಈಗ ವೈರಲ್‌ ಆಗಿದೆ. ಈ ಆಡಿಯೊ ಬಹಿರಂಗವಾದ ಬಳಿಕ ಮುರುಘಾಶ್ರೀಗಳ ಮೇಲಿನ ಪ್ರಕರಣಗಳ ಸತ್ಯಾಸತ್ಯತೆಯ ಬಗ್ಗೆ ಮತ್ತೆ ಹಲವು ಪ್ರಶ್ನೆಗಳು ಕೂಡಾ ಎದ್ದಿವೆ.

ಬಾಲಕಿಯೊಬ್ಬಳನ್ನು ಆಕೆಯ ಬಡತನ, ತಾಯಿ ಅನಾರೋಗ್ಯ, ಮನೆಯ ಆರ್ಥಿಕ ಸ್ಥಿತಿಗತಿಗಳನ್ನು ಬಂಡವಾಳ ಮಾಡಿಕೊಂಡು ಸುಳ್ಳು ಹೇಳಿಕೆ ನೀಡಲು ವ್ಯಕ್ತಿಯೊಬ್ಬ ಪ್ರಚೋದನೆ ಮಾಡುತ್ತಿರುವ ಆಡಿಯೊ ಬಹಿರಂಗವಾಗಿತ್ತು. ಇದರ ಬಗ್ಗೆ ಮುರುಘಾಮಠದ ಉಸ್ತುವಾರಿಯಾಗಿರುವ ಬಸವಪ್ರಭು ಶ್ರೀಗಳು ಪೊಲೀಸರಿಗೆ ದೂರು ನೀಡಿದ್ದರು. ೧೪ ನಿಮಿಷಗಳ ಆಡಿಯೋದಲ್ಲಿ ಧ್ವನಿಯನ್ನು ಸ್ವಷ್ಟವಾಗಿ ಗುರುತಿಸಬಹುದಾಗಿದ್ದು, ಅದರ ಆಧಾರದಲ್ಲಿ ಈಗ ಬಸವರಾಜೇಂದ್ರನನ್ನು ಸೆರೆ ಹಿಡಿದು ವಿಚಾರಣೆ ನಡೆಸಲಾಗಿದೆ.

ಈಗ ಮುರುಘಾ ಶರಣರ ವಿರುದ್ಧ ಸುಳ್ಳು ದೂರು ನೀಡುವಂತೆ ವ್ಯಕ್ತಿಯೊಬ್ಬರು ಕರೆ ಮಾಡಿರುವ ಆಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಸಂಭಾಷಣೆ 14 ನಿಮಿಷ 15 ಸೆಕೆಂಡ್‌ ಕಾಲ ಇದ್ದು, ಕರೆ ಮಾಡಿದ ವ್ಯಕ್ತಿ ಬಾಲಕಿಗೆ ಸುಳ್ಳು ದೂರು ನೀಡುವಂತೆ ಪ್ರಚೋದನೆ ಮಾಡಿದ್ದಲ್ಲದೆ, ಸಹಾಯ ಮಾಡುವುದಾಗಿ ಆಮಿಷವನ್ನೂ ಒಡ್ಡಿದ್ದಾನೆ.

ಮೊಬೈಲ್‌ ಮೂಲಕ ಕರೆ ಮಾಡಿದ ವ್ಯಕ್ತಿಯು ಬಾಲಕಿ ಬಳಿ ನೇರವಾಗಿ ಮುರುಘಾಶ್ರೀ ವಿಷಯವನ್ನು ಪ್ರಸ್ತಾಪಿಸಿದ್ದಾನೆ. ‘ನೀನೀಗ ಮುರುಘಾ ಶ್ರೀಗಳ ಮೇಲೆ ದೂರು ದಾಖಲಿಸಬೇಕು. ನಿನ್ನ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ನೀಡು’ ಎಂದು ಹೇಳಿದ್ದಾನೆ. ಅದಕ್ಕೆ ಆ ಬಾಲಕಿ, ‘ಇಲ್ಲಾ.. ನಾನು ಹೇಗೆ ಆ ರೀತಿಯಾಗಿ ದೂರು ನೀಡಲಿ? ನನಗೆ ಆ ರೀತಿಯಾಗಿ ಶ್ರೀಗಳು ಮಾಡಿಲ್ಲ..’ ಎಂದು ಹೇಳಿದ್ದಾಳೆ. ಅದಕ್ಕೆ ಆ ವ್ಯಕ್ತಿಯು, ‘ನೀನು ನಿನ್ನ ಮೇಲೆ ಅತ್ಯಾಚಾರ ಆಗಿದೆ ಎಂದೇನೂ ದೂರು ಕೊಡುವುದು ಬೇಡ. ಹಾಗೇ ಆಗಾಗ ಮೈಮುಟ್ಟುತ್ತಿದ್ದರು, ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು ಎಂದು ದೂರು ಕೊಟ್ಟರೆ ಸಾಕು.. ಅಷ್ಟು ಹೇಳಲು ನಿನಗೇನು?’ ಎಂದು ಕೇಳಿದ್ದಾನೆ. ಅದಕ್ಕೆ ಆ ಬಾಲಕಿಯು ಸುಳ್ಳು ಹೇಳಲು ನಿರಾಕರಿಸಿದ್ದಾಳೆ. ಹೀಗೆ ೧೪ ನಿಮಿಷಗಳ ಕಾಲ ಆಡಿಯೊ ಸಾಗುತ್ತದೆ. ಈ ಮಧ್ಯೆ ಆ ವ್ಯಕ್ತಿಯು ಸುಳ್ಳು ದೂರು ನೀಡಿದರೆ ನಿನ್ನ ಜೀವನ ಉದ್ದಾರ ಆಗುತ್ತದೆ. ಸಹಾಯ ಮಾಡುತ್ತೇವೆ ಎಂದೂ ಹೇಳಿದ್ದಾನೆ. ಈ ಎಲ್ಲ ಸಂಗತಿಗಳುಳ್ಳ ಆಡಿಯೊ ಈಗ ವೈರಲ್‌ ಆಗಿದೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *