ಧಾರವಾಡ ಪೊಲೀಸ್ ಇಲಾಖೆಯಲ್ಲಿ ದಕ್ಷತೆ, ಪ್ರಮಾಣಿಕತೆ, ಕಾರ್ಯತತ್ಪರತೆಯನ್ನು ಹೆಚ್ಚಿಸಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಲು ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಲೋಕೇಶ್ ಜಗಲಾಸರ್ ಅವರು ಜಿಲ್ಲೆಯ ಠಾಣೆಗಳ ಕಾರ್ಯಸಾಧನೆ ಆಧಾರದ ಮೇಲೆ ರ್ಯಾಂಕಿಂಗ ಮಾಡಿ, ಪ್ರಶಸ್ತಿ ನೀಡುವ ಮೂಲಕ ಇಲಾಖೆ ಸಿಬ್ಬಂದಿಗಳನ್ನು ಪ್ರೋತ್ಸಾಹಿಸಲು ವಿನೂತನ ಕ್ರಮ ಜಾರಿಗೆ ತಂದಿದ್ದಾರೆ.
ಪೋಲಿಸ್ ಮ್ಯಾನುವಲ್ ದಲ್ಲಿ ಗೊತ್ತುಪಡಿಸಿರುವ ಕಾಲಮಿತಿಯಲ್ಲಿ ಪ್ರಕರಣಗಳ ಪ್ರತಿ ಹಂತದಲ್ಲೂ ಕ್ರಮವಹಿಸುವ ಕುರಿತು ಮತ್ತು ಸಾಮಾಜಿಕ ನ್ಯಾಯದ ಆಧಾರದಲ್ಲಿ ಮಾಡಿರುವ ತನಿಖೆ ಆಧರಿಸಿ, ಪ್ರತಿ ಠಾಣೆಗೆ ಪ್ರಶಸ್ತಿ ನೀಡಲು ಕ್ರಮ ವಹಿಸಿದ್ದಾರೆ.
ಇದರಿಂದಾಗಿ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯಲ್ಲಿ ಪಾರದರ್ಶಕತೆ, ಸಮಯ-ನಿಯಮಪಾಲನೆ, ತಕ್ಷಣದ ಸ್ಪಂದನೆ, ನಾಗರಿಕರೊಂದಿಗಿನ ಸೌಜನ್ಯತೆ ಮತ್ತು ಪ್ರಕರಣಗಳ ಶಿಘ್ರ ತನಿಖೆಗೆ ಪ್ರೇರಣೆ ಸೀಗುತ್ತದೆ. ಪೊಲೀಸ್ ಠಾಣೆಗಳ ಮಧ್ಯ ಪರಸ್ಪರ ಉತ್ತಮ ಸಂಬಂಧ, ಸಕಾರಾತ್ಮಕ ಸ್ಪರ್ಧೆ ಏರ್ಡುತ್ತದೆ. ಇದರಿಂದ ನ್ಯಾಯ ಬಯಸಿ ಬರುವ ಸಾರ್ವಜನಿಕರಿಗೆ ಅನಕೂಲವಾಗುತ್ತದೆ.
ಕಳೆದ ವರ್ಷದಲ್ಲಿ ವಿವಿಧ ವಿಷಯಗಳಲ್ಲಿ ಜಿಲ್ಲೆಯ ಪೋಲಿಸ್ ಠಾಣೆಗಳು ಮಾಡಿರುವ ಕಾರ್ಯ, ಸಾಧನೆಯನ್ನು ನಿರ್ಧಿಷ್ಟ ಮಾನದಂಡ ಮತ್ತು ನಮೂನೆಗಳ ಮಾಹಿತಿ ಆದರಿಸಿ, ರ್ಯಾಂಕಿಂಗ್ ಮಾಡಿ, ಇತ್ತಿಚೆಗೆ ಧಾರವಾಡ ನಗರದ ಡಿಎಆರ್ ಮೈದಾನದಲ್ಲಿ ಜರುಗಿದ ಜಿಲ್ಲಾ ಪೋಲಿಸ್ ಕ್ರೀಡಾಕೂಟದಲ್ಲಿ ವಿವಿಧ ಪೋಲಿಸ್ ಠಾಣೆಗಳಿಗೆ ಈ ವಿಶೇಷ ಪ್ರಶಸ್ತಿಗಳನ್ನು ನೀಡಲಾಗಿದೆ.
2021-22 ನೇ ಸಾಲಿನಲ್ಲಿ ತನಿಖಾ ಪ್ರಕರಣಗಳ ಉತ್ತಮ ವಿಲೇವಾರಿಗಾಗಿ ಗುಡಗೇರಿ ಪೋಲಿಸ್ ಠಾಣೆ, ಅತೀ ಹೆಚ್ವು ತನಿಖಾ ವರದಿಗಳ ವಿಲೇವಾರಿಗಾಗಿ ಕಲಘಟಗಿ ಪೋಲಿಸ್ ಠಾಣೆ, ಅತೀ ಹೆಚ್ಚು ಸ್ವತ್ತಿನ ಪ್ರಕರಣಗಳ ಪತ್ತೆ ಕಾರ್ಯಕ್ಕಾಗಿ ಕಲಘಟಗಿ ಮತ್ತು ಅಳ್ನಾವರ ಪೋಲಿಸ್ ಠಾಣೆ, ಸಕಾಲಕ್ಕೆ ವಾರೆಂಟ್ ಜಾರಿಯಲ್ಲಿ ಉತ್ತಮ ಸಾಧನೆಗೆ ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣೆ, ಉತ್ತಮ ಪೋಲಿಸ್ ಐಟಿ ನಿರ್ವಹಣೆಗೆ ಗುಡಗೇರಿ ಹಾಗೂ ಧಾರವಾಡ ಮಹಿಳಾ ಪೋಲಿಸ್ ಠಾಣೆ, ಇ-ಬೀಟ್ ಉತ್ತಮ ನಿರ್ವಹಣೆಗಾಗಿ ಅಣ್ಣಿಗೇರಿ ಪೋಲಿಸ್ ಠಾಣೆ, ದೀರ್ಘಾವಧಿ ತೆಮರೆಸಿಕೊಂಡವರ ಪತ್ತೆ ಪ್ರಕರಣಗಳಲ್ಲಿ ಉತ್ತಮ ಸಾಧನೆ ಮಾಡಿದ ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣೆ, ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸಿದ, ಮಟ್ಕಾ, ಗ್ಯಾಂಬ್ಲಿಂಗ್, ಡ್ರಗ್ಸ್ ಮುಂತಾದ ಅಕ್ರಮ ಚಟುವಟಿಕೆಗಳ ಮೇಲೆ ದಾಳಿ ಮಾಡುವಲ್ಲಿ ಉತ್ತಮ ಸಾಧನೆ ತೋರಿದ ಕುಂದಗೋಳ ಪೋಲಿಸ್ ಠಾಣೆ ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಸಂಬಂದ, ಜನಸ್ನೇಹಿ ವರ್ತನೆ ತೋರಿದ ಗರಗ ಮತ್ತು ಅಳ್ನಾವರ ಪೋಲಿಸ್ ಠಾಣೆಗಳಿಗೆ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ.
ಎಲ್ಲ ವಿಷಯಗಳ ನಿರ್ವಹಣೆಯಲ್ಲೂ ಉತ್ತಮ ಕಾರ್ಯಸಾಧನೆ ತೋರಿದ ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣೆಗೆ ಸರ್ವೊತ್ತಮ ಪೋಲಿಸ್ ಠಾಣೆ ಪ್ರಕಟಿಸಲಾಗಿದ್ದು, ಠಾಣಾ ಮುಖ್ಯಸ್ಥ, ಸಿಪಿಐ ರಮೇಶ ಗೋಕಾಕ ಅವರು ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಪ್ರಶಸ್ತಿ ಸ್ವಿಕರಿಸಿದರು.
ಜಿಲ್ಲಾ ಪೋಲಿಸ್ ಇಲಾಖೆಯ ಈ ವಿನೂತನ ಕ್ರಮ ಜಿಲ್ಲೆಯ ಪೋಲಿಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳಲ್ಲಿ ಹೆಮ್ಮೆ, ಹುಮ್ನಸ್ಸು ಮೂಡಿಸಿದ್ದು, ನಿತ್ಯದ ಕೆಲಸದಲ್ಲಿ ಮತ್ತಷ್ಟು ದಕ್ಷತೆಯನ್ನು ಹೆಚ್ಚಿಸುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

