ಬೆಂಗಳೂರು: ತವರಿನ ಅಂಗಣದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು, ಭಾರತ ತಂಡವೇ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಚಾಂಪಿಯನ್ ಪಟ್ಟ ಅಲಂಕರಿಸಬೇಕಾದರೆ ನಿರೀಕ್ಷೆಗಳ ಒತ್ತಡವನ್ನು ಜಯಿಸಬೇಕೆಂದು ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಸಲಹೆ ನೀಡಿದ್ದಾರೆ.
13ನೇ ಆವೃತ್ತಿಯ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯಲಿದ್ದು, ಇದಕ್ಕಾಗಿ ಬಿಸಿಸಿಐ, ಈಗಾಗಲೇ ರೋಹಿತ್ ಶರ್ಮಾ ನಾಯಕತ್ವದಲ್ಲಿ ಸಂಭಾವ್ಯ ತಂಡವನ್ನು ಪ್ರಕಟಿಸಿದ್ದು, ಭರ್ಜರಿ ಪೂರ್ವ ತಯಾರಿಯಲ್ಲಿ ತೊಡಗಿದೆ.
1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದಿದ್ದ ಟೀಮ್ ಇಂಡಿಯಾ, 2011ರಲ್ಲಿ ಎಂ.ಎಸ್ ಧೋನಿ ಸಾರಥ್ಯದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ವಿಶ್ವಕಪ್ ಟೂರ್ನಿ ಆಯೋಜನೆಗೊಂಡಿದ್ದು,12 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ರೋಹಿತ್ ಶರ್ಮಾ ಪಡೆ ಚಾಂಪಿಯನ್ ಮುಕುಟವನ್ನು ಮುಡಿಗೇರಿಸಿಕೊಳ್ಳುವ ಭರವಸೆ ಮೂಡಿಸಿದೆ. ಈ ಕುರಿತು ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಗಮಸೆಳೆದಿದ್ದಾರೆ
ಅವರು ಯಾವ ರೀತಿಯ ಯೋಜನೆ ರೂಪಿಸಿದ್ದಾರೆಂದು ನನಗೆ ನಿಜವಾಗಿಯೂ ಗೊತ್ತಿಲ್ಲ. ಏಕೆಂದರೆ ತಂಡ ಇನ್ನೂ ಪ್ರಕಟಿಸಬೇಕಿದೆ. ಕಳೆದ ಹಲವಾರು ವರ್ಷಗಳಿಂದ ಎಲ್ಲ ವಿಶ್ವಕಪ್ ಟೂರ್ನಿಗಳಲ್ಲೂ ಭಾರತ ತಂಡವು ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿಯೇ ಅಖಾಡಕ್ಕಿಳಿಯುತ್ತದೆ, ಆದರೆ ಈ ಬಾರಿ ಸುದೀರ್ಘ ಕಾಯುವಿಕೆಗೆ ಫಲ ಸಿಗಬಹುದು,” ಎಂದು ವಿಶ್ವಕಪ್ ವಿಜೇತ ನಾಯಕ ಪಿಟಿಐಗೆ ಹೇಳಿದ್ದಾರೆ.