ಹುಬ್ಬಳ್ಳಿ: ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಇಲ್ಲದಿದ್ದರೆ ಎರಡನೇ ಬಾರಿ ಶೇ.ಮೂವತ್ತರಷ್ಟು ಮಧ್ಯಂತರ ಪರಿಹಾರ ಘೋಷಣೆ ಮಾಡಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ ಸಜ್ಜನ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರ ಏಳನೇ ವೇತನ ಆಯೋಗವು ರಚನೆಯಾಗಿ ಒಂದು ವರ್ಷವಾಗುತ್ತಿದೆ. ಅಂದು ಆಯೋಗದ ಅನುಷ್ಠಾನಕ್ಕಾಗಿ ಹೋರಾಟಕ್ಕೆ ಇಳಿದ ಮೇಲೆ ಅಂದಿನ ರಾಜ್ಯ ಸರ್ಕಾರ ಶೇ. ೧೭ ರಷ್ಟು ಮಧ್ಯಂತರ ಪರಿಹಾರ ನೀಡಿ, ಚುನಾವಣಾ ನಿಮಿತ್ತವಾಗಿ ಆರು ತಿಂಗಳು ಮುಂದೂಡಲಾಗಿತ್ತು. ಹೀಗಾಗಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿಯವರು ಸರ್ಕಾರದ ಮನವೊಲಿಸಬೇಕು. ವರ್ಗಾವಣೆ ಅಧಿನಿಯಮದ ಪ್ರಕಾರ ವಲಯ ವರ್ಗಾವಣೆ ಅಥವಾ ಕಡ್ಡಾಯ ವರ್ಗಾವಣೆ ಈ ಕೂಡಲೇ ಪ್ರಾರಂಭಿಸಬೇಕೆಂದ ಅವರು, ವರ್ಷದಲ್ಲಿ ಎರಡು ಬಾರಿ ಶಿಕ್ಷಕರಿಗೆ ಸಹ ಶಿಕ್ಷಕರಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಮುಖ್ಯ ಶಿಕ್ಷಕರ ಹುದ್ದೆಯಿಂದ ಹಿರಿಯ ಶಿಕ್ಷಕರ ಹುದ್ದೆಗೆ ಪದೋನ್ನತಿ ಪ್ರಕ್ರಿಯೆ ಆರಂಭಿಸಬೇಕು ಹಾಗೂ ಎಂಬತ್ತು ಸಾವಿರ ಪದವೀಧರರ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ ಆರರಿಂದ ತಂಡಕ್ಕೆ ವಿಲೀನಗೊಳಿಸಬೇಕು ಸೇರಿದಂತೆ ಮೊದಲಾದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ, ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ಗೋವಿಂದ್ ಜಿಜಾರೆ, ಶಿಸ್ತು ಸಮಿತಿ ಅಧ್ಯಕ್ಷ ಹನುಮಂತಪ್ಪ ಮೇಟಿ ಉಪಸ್ಥಿತರಿದ್ದರು.