ಮೈಸೂರು: ಅಂಬಾರಿ ಆನೆ ಅರ್ಜುನನ ಸಾವಿಗೆ ಇಡೀ ಕರುನಾಡೇ ಕಂಬನಿ ಮಿಡಿದಿದೆ. ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಶಿಸ್ತುಬದ್ಧವಾಗಿ ಕಾರ್ಯಾಚರಣೆ ನಡೆಸದ ಪರಿಣಾಮ ಅರ್ಜುನ ಮೃತಪಡಬೇಕಾಗಿ ಬಂತು ಎಂಬ ಮಾತುಗಳು ಕೇಳಿ ಬರುತ್ತಿದೆ. ಇದೀಗ ಅಂದು ಕಾರ್ಯಾಚರಣೆಯಲ್ಲಿದ್ದ ಪಶು ವೈದ್ಯ ಡಾ.ರಮೇಶ್, ಅರ್ಜುನನ ಮೇಲೆ ಕಾಡಾನೆ ದಾಳಿಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಗುಂಡೇಟಿನಿಂದ ಆತ ಮೃತಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅರ್ಜುನ ಆನೆ ನನ್ನ ನೆಚ್ಚಿನ ಆನೆ. ಕಾರ್ಯಾಚರಣೆ ವೇಳೆ ಹಠಾತ್ತನೆ ಕಾಡಾನೆ ದಾಳಿ ಮಾಡಿತು. ಏಕಾಏಕಿ ಅರ್ಜುನನ ಕುತ್ತಿಗೆ ಭಾಗಕ್ಕೆ ತಿವಿಯಿತು. 5 ನಿಮಿಷ ಆನೆಗಳ ಮಧ್ಯೆ ಕಾಳಗ ನಡೆಯಿತು. ನಾವು ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲಘಿ ಎಂದು ಆ ದಿನದ ಘಟನೆಯನ್ನು ನೆನಪು ಮಾಡಿಕೊಂಡರು.
ಸಾಮಾನ್ಯವಾಗಿ ನಮಗೆ ಡಬ್ಬಲ್ ಬ್ಯಾರೆಲ್ ಗನ್ ಕೊಟ್ಟಿರುತ್ತಾರೆ ನಿಜ. ಆದರೆ, ನಾವು ಅದನ್ನು ಗಾಳಿಯಲ್ಲಿ ಗುಂಡು ಹಾರಿಸಬೇಕು ಅಷ್ಟೇಘಿ. ನೇರವಾಗಿ ಯಾವ ಪ್ರಾಣಿಗೂ ಹೊಡೆಯುವಂತಿಲ್ಲ. ಹಾಗೆ ನೋಡಿದರೆ ನಾವು ಗನ್ ಬಳಸಿಲ್ಲ. ಅದು ಗುಂಡೇಟಿನಿಂದ ಅರ್ಜುನ ಸಾಯಲಿಲ್ಲ. ಹಠಾತ್ತನೆ ಕಾಡಾನೆ ಅರ್ಜುನನ ಮೇಲೆ ದಾಳಿ ನಡೆಸಿತು. ನಮ್ಮ ಕಣ್ಣೆದುರಿಗೆ ಅರ್ಜುನ ನೆಲಕ್ಕೊರಗಿದ್ದು ಕಂಡು ಆಘಾತವಾಯಿತು ಎಂದು ಬೇಸರ ಹೊರ ಹಾಕಿದರು.