ಗದಗ: ಎರಡು ವರ್ಷಗಳಿಂದ ಮಳೆ ಇಲ್ಲದೇ ಬತ್ತಿದ್ದ ಕೆರೆಗಳಿಗೆ ಮತ್ತೆ ಜೀವಕಳೆ ಬಂದಿದ್ದು, ಜಿಲ್ಲೆಯ ಐತಿಹಾಸಿಕ ಡಂಬಳದ ವಿಕ್ಟೋರಿಯಾ ಕೆರೆ, ನಗರದ ಭೀಷ್ಮ ಕೆರೆ ಸೇರಿ ಬಹುತೇಕ ಕೆರೆಗಳಿಗೆ ಸಿಂಗಟಾಲೂರು ಎಡದಂಡೆ ಕಾಲುವೆ ಮೂಲಕ ತುಂಗಭದ್ರಾ ನೀರು ಹರಿಸಲಾಗುತ್ತಿದ್ದು, ಕೆರೆಗಳಿಗೆ ಜೀವಕಳೆ ಬಂದಂತಾಗಿದೆ.
ಕಳೆದ ಬೇಸಿಗೆಯಲ್ಲಿ ಕೆರೆಗಳಲ್ಲಿ ನೀರಿಲ್ಲದ ಕಾರಣ ಕೆರೆಗಳನ್ನೇ ಅವಲಂಬಿಸಿದ್ದ ಗ್ರಾಮಗಳು ತೊಂದರೆ ಅನುಭವಿಸಿದ್ದವು. ಅಲ್ಲದೇ, ಕೃಷಿಗೆ ನೆರವಾಗಿದ್ದ ಕೆರೆಗಳು ಬತ್ತಿದ್ದರಿಂದ ರೈತರು ಪರದಾಡಿದ್ದರು. ಪ್ರಸಕ್ತ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಅಷ್ಟಾಗಿ ಮಳೆಯಾಗದಿದ್ದರೂ ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.
ಜಿಲ್ಲೆ ಕಳೆದ ಕೆಲ ವರ್ಷಗಳಿಂದ ಅತೀವೃಷ್ಟಿ, ಅನಾವೃಷ್ಟಿ ಸೇರಿ ನೆರೆ ಹಾಗೂ ಬರಗಾಲದಂತಹ ಪರಿಸ್ಥಿತಿ ಎದುರಿಸಿತ್ತು. ಇದರಿಂದ ಕೆಲ ಕೆರೆಗಳು ಭರ್ತಿಯಾಗಿ ಕೋಡಿ ಹರಿದಿದ್ದರೆ, ಇನ್ನು ಕೆಲವು ಕೆರೆಗಳು ನೀರಿಲ್ಲದೇ ಬತ್ತಿಹೋದ ಉದಾಹರಣೆಗಳಿದ್ದವು.
ಆದರೆ, ಪ್ರಸಕ್ತ ವರ್ಷ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಜಿಲ್ಲೆಯ ಐತಿಹಾಸಿಕ ಡಂಬಳದ ವಿಕ್ಟೋರಿಯಾ ಕೆರೆ, ಗದಗ ಭೀಷ್ಮ ಕೆರೆ, ಮುಂಡವಾಡ, ಹಿರೇವಡ್ಡಟ್ಟಿ, ಶಿರೋಳ, ತಾಮ್ರ ಗುಂಡಿ, ಜಂತ್ಲಿಶಿರೂರು, ಸಿಂಗಟರಾಯನಕೆರೆ, ಬಾಲೆ ಹೊಸೂರಿನ ಎರಡು ಕೆರೆಗಳು ಸೇರಿ ಜಿಲ್ಲೆಯ ಬಹುತೇಕ ಕೆರೆಗಳಿಗೆ ಅವಶ್ಯಕತೆಗನುಸಾರವಾಗಿ ನೀರು ಹರಿಸುತ್ತಿರುವುದರಿಂದ ಕೆರೆ ಭರ್ತಿಯಾಗುತ್ತಿವೆ. ಇದರಿಂದ ಅಂತರ್ಜಲ ಮರುಪೂರ್ಣಗೊಳ್ಳುವಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

