ಬೀದರ್ : ಮುಡಾ, ವಕ್ಫ್ ಬಗ್ಗೆ ಪ್ರತಿಪಕ್ಷಗಳು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದು, ಆ ಸುಳ್ಳು ಆರೋಪಗಳಿಗೆ ಉಪ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ರಾಜ್ಯದ ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದ್ದಾರೆ.
ಜಿಲ್ಲೆಯ ಬಸವಕಲ್ಯಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಮತದಾರರು ನಮ್ಮ ಕೈ ಹಿಡಿದಿದ್ದು, ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಭರ್ಜರಿ ಗೆಲವು ತಂದು ಕೊಟ್ಟಿದ್ದಾರೆ. ನಮ್ಮ ಗ್ಯಾರಂಟಿಗಳಿಗೆ ಜಯ ಸಿಕ್ಕಿದೆ. ಜಾತ್ಯತೀತ ವಿಚಾರಗಳಿಗೆ ಜಯ ಸಿಕ್ಕಿರುವುದು ಬಿಜೆಪಿ, ಜೆಡಿಎಸ್ ಅನೈತಿಕ ಸಂಬಂಧಕ್ಕೆ ಇದು ತಕ್ಕ ಉತ್ತರವಾಗಿದೆ ಎಂದರು.
ವಿಶೇಷವಾಗಿ ಶಿಗ್ಗಾಂವಿ ಮತದಾರರು ಜಾತ್ಯತೀತವಾಗಿ ಮತ ಹಾಕಿದ್ದು, ಜಾತಿ-ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡಿದರೂ ನಮ್ಮ ಅಭ್ಯರ್ಥಿ ಯಾಸಿರ್ ಖಾನ್ ಗೆದ್ದಿದ್ದು ಸತ್ಯಕ್ಕೆ ಜಯವಾಗಿದೆ. ಈ ಮೂರು ಕ್ಷೇತ್ರದ ಗೆಲುವಿನಿಂದಾಗಿ ಇನ್ನಷ್ಟು ಕೆಲಸ ಮಾಡುವ ಹುಮ್ಮಸ್ಸು ಸಿಕ್ಕಿದೆ. ಸಿದ್ಧರಾಮಯ್ಯನವರ ನಾಯಕತ್ವಕ್ಕೆ ಜನ ಬೆಂಬಲಿಸಿದ್ದಾರೆ. ಪ್ರತಿಪಕ್ಷದವರು ಇನ್ನಾದರೂ ಬುದ್ಧಿ ಕಲಿಯಲಿ ಎಂದು ಅವರು ಚಾಟಿ ಬೀಸಿದರು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿರುವುದು ಪರಿಶೀಲನೆ ಮಾಡಬೇಕಾಗುತ್ತದೆ. ಎಕ್ಸಿಟ್ ಪೋಲ್ನಲ್ಲಿ ಸಮ ಪೈಪೋಟಿ ಎಂದು ಹೇಳಲಾಗಿತ್ತು. ಏನಾಗಿದೆ ಎಂದು ನಮ್ಮ ವರಿಷ್ಠರು ಪರಾಮರ್ಶೆ ಮಾಡುತ್ತಾರೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





