Breaking News

ಮುಡಾ ಹಗರಣದ ಬಿಸಿ ತಣ್ಣಗಾಗುತ್ತಿದ್ದಂತೆ ಸಂಪುಟ ಪುನರ್ ರಚನೆಗೆ ಸಿಎಂ ಸಿದ್ದರಾಮಯ್ಯ ಸಜ್ಜು

ಬೆಂಗಳೂರು: ಮುಡಾ ಹಗರಣದ ಬಿಸಿ ತಣ್ಣಗಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೆ ಸಂಪುಟ ಪುನರ್ ರಚನೆಗೆ ಸಜ್ಜಾಗುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಲಾರಂಭಿಸಿದೆ. ಮೇಜರ್ ಸರ್ಜರಿ ಮಾಡದಿದ್ದರೂ, ಕೆಲವೊಂದು ಹಾಲೀ ಸಚಿವರು ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಮುಡಾ ಹಗರಣ ಸಾಕಷ್ಟು ರಾಜ್ಯದಲ್ಲಿ ಸದ್ದು ಮಾಡುತ್ತಿದ್ದ ವೇಳೆ, ಹಲವು ರಾಜ್ಯ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿ ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದರು. ಆದರೆ, ಸದ್ಯ ಮುಖ್ಯಮಂತ್ರಿಗಳ ಮುಡಾ ಗೊಂದಲ ಬಗೆಹರಿಯುವ ತನಕ ಯಾವ ಬದಲಾವಣೆಯೂ ಇಲ್ಲ ಎಂದು ದೆಹಲಿ ನಾಯಕರು ಸ್ಪಷ್ಟಪಡಿಸಿದ್ದರು.
ಮುಡಾ ಪ್ರಕರಣದ ನಂತರ, ಮೂರು ಅಸೆಂಬ್ಲಿ ಉಪಚುನಾವಣೆಯನ್ನೂ ಗೆದ್ದದ್ದು ಮತ್ತು ವಿಧಾನ ಮಂಡಲದ ಚಳಿಗಾಲದ ಅಧಿವೇಶನವೂ ಮುಕ್ತಾಯಗೊಂಡಿದ್ದರಿಂದ, ಮತ್ತೆ ಸಂಪುಟ ಪುನರ್ ರಚನೆಯ ವಿಚಾರ ಮುನ್ನಲೆಗೆ ಬಂದಿದೆ. ಸಿದ್ದರಾಮಯ್ಯನವರ ಆಪ್ತ ಬಣದಲ್ಲಿ ಗುರುತಿಸಿಕೊಳ್ಳದ ನಾಯಕರೊಬ್ಬರಿಗೆ ಈ ಬಾರಿ ಚಾನ್ಸ್ ಸಿಗಲಿದೆ ಎಂದು ಹೇಳಲಾಗುತ್ತಿದೆ.
ವಾಲ್ಮೀಕಿ ನಿಗಮ ಹಗರಣದ ವಿಚಾರ ಸರ್ಕಾರವನ್ನು ಸುತ್ತಿಕೊಂಡಿದ್ದಾಗ, ಸಚಿವರಾಗಿದ್ದ ಬಿ.ನಾಗೇಂದ್ರ ಅವರ ರಾಜೀನಾಮೆಯನ್ನು ಪಡೆದುಕೊಳ್ಳಲಾಗಿತ್ತು. ಇದಾದ ನಂತರ, ಅವರಿಗೆ ಕ್ಲೀನ್ ಚಿಟ್ ಸಿಕ್ಕ ಹಿನ್ನಲೆಯಲ್ಲಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಖಾತ್ರಿಯಾಗಿದೆ. ಇದರ ಜೊತೆಗೆ, ಸಂಡೂರು ಉಪಚುನಾವಣೆ ಗೆಲುವಿನಲ್ಲೂ ಅವರ ಪಾತ್ರ ಮುಖ್ಯವಾಗಿರುವ ಹಿನ್ನಲೆಯಲ್ಲಿ, ಅವರಿಗೆ ಮತ್ತೆ ಸಚಿವ ಸ್ಥಾನ ಸಿಗುವುದು ಗ್ಯಾರಂಟಿಯಾಗಿದ್ದರೂ, ಯಾವಾಗ ಎನ್ನುವುದು ಸಿದ್ದರಾಮಯ್ಯನವರ ವಿವೇಚನೆಗೆ ಹೈಕಮಾಂಡ್ ಬಿಟ್ಟಿದೆ.
ಸಂಪುಟದಿಂದ ಕೆಲವರನ್ನು ಕೈಬಿಡುವ ಸಾಧ್ಯತೆಯ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿದ್ದರೂ, ಯಾವ ಸಚಿವರಿಗೆ ಕೊಕ್ ನೀಡಲಾಗುತ್ತದೆ ಎನ್ನುವ ವಿಚಾರದಲ್ಲಿ ಸ್ಪಷ್ಟತೆಯಿಲ್ಲ. ಸಚಿವಾಲಯವನ್ನು ನಿಭಾಯಿಸುವ ಆಧಾರದ ಮೇಲೆ, ಕೆಲವು ಸಚಿವರನ್ನು ಕೈಬಿಟ್ಟು ಹೊಸ ಮುಖವನ್ನು ಸಂಪುಟಕ್ಕೆ ತರುವ ಸಾಧ್ಯತೆಯಿದೆ.
ಕೆಲವೊಂದು ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಟೀಕಿಸುತ್ತಿದ್ದ, ವಿಧಾನ ಪರಿಷತ್ ಸದಸ್ಯರೂ ಆಗಿರುವ ಬಿ.ಕೆ.ಹರಿಪ್ರಸಾದ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಬಹುತೇಕ ಖಚಿತ ಎನ್ನುವ ಮಾಹಿತಿಯಿದೆ. ಹರಿಪ್ರಸಾದ್, ಅವರು ಸಿದ್ದರಾಮಯ್ಯನವರ ಆಪ್ತ ಬಣದಲ್ಲಿ ಇಲ್ಲದೇ ಇರುವ ಶಾಸಕರಾಗಿದ್ದಾರೆ.
ರಾಜಕೀಯ ಜೀವನದ ನಿವೃತ್ತಿಯ ಅಂಚಿನಲ್ಲಿರುವುದಾಗಿ ಖುದ್ದು ಸಿದ್ದರಾಮಯ್ಯನವರೇ ಹೇಳಿದ್ದರು. ಹಾಗಾಗಿ, ತಮ್ಮ ಆಪ್ತ ವಲಯದವರನ್ನು ಹೊರತಾದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ, ರಾಜ್ಯ ರಾಜಕಾರಣದಲ್ಲಿ ಲಿಬರಲ್ ಆಗಿ ಕೆಲಸ ಮಾಡುವ ಮುನ್ಸೂಚನೆಯನ್ನು ನೀಡಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ದಲಿತರು, ಅಲ್ಪಸಂಖ್ಯಾತರು, ಬಹುದೊಡ್ಡ ಸಂಖ್ಯೆಯಲ್ಲಿ ಇತರ ಹಿಂದುಳಿದ ವರ್ಗದವರಿಗೆ ಕರ್ನಾಟಕ ಸರ್ಕಾರದಲ್ಲಿ ಅನ್ಯಾಯವಾಗುತ್ತಲೇ ಇದೆ ಎಂದು ಪರೋಕ್ಷವಾಗಿ, ಸಿಎಂ ಸಿದ್ದರಾಮಯ್ಯನವರ ವಿರುದ್ದ ಹರಿಪ್ರಸಾದ್ ಗುಡುಗಿದ್ದರು. ಈಡಿಗ, ಬಿಲ್ಲವ, ನಾಮಧಾರಿ ಮತ್ತು ಇತರ ಹಿಂದುಳಿದ ವರ್ಗಗಳ ಸಮುದಾಯದ ಸಭೆಯಲ್ಲಿ ಹರಿಪ್ರಸಾದ್ ಮಾತನಾಡುತ್ತಿದ್ದರು.
ಸೆಪ್ಟಂಬರ್ ತಿಂಗಳಲ್ಲಿ ಬಿ.ಕೆ.ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಶೋಕಾಸ್ ನೊಟೀಸ್ ಅನ್ನು ನೀಡಿತ್ತು. ಬಿಜೆಪಿ ಮತ್ತು ವೈಎಸ್‍ಆರ್ ಕಾಂಗ್ರೆಸ್ಸಿನ ನಾಯಕರ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದಕ್ಕೆ ನೊಟೀಸ್ ನೀಡಲಾಗಿತ್ತು. ಯಾರನ್ನು ಸಿಎಂ ಮಾಡಬೇಕು, ಹೇಗೆ ಇಳಿಸಬೇಕು ಎನ್ನುವುದು ನನಗೆ ಗೊತ್ತಿದೆ. ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಕ್ಕೆ ಹೋಗುವುದಿಲ್ಲ, ಸಚಿವನಾಗುವುದು ಅದು ಬೇರೊಂದು ಪ್ರಶ್ನೆ ಎಂದು, ಮತ್ತೊಮ್ಮೆ ಸಿದ್ದರಾಮಯ್ಯನವರ ಹೆಸರು ಹೇಳದೇ ಟೀಕಿಸಿದ್ದರು.
ಸಿದ್ದರಾಮಯ್ಯನವರ ಜೊತೆಗೆ ಉತ್ತಮ ಬಾಂಧವ್ಯ ಇಲ್ಲದಿದ್ದರೂ, ಹರಿಪ್ರಸಾದ್ ದೆಹಲಿ ಮಟ್ಟದಲ್ಲಿ ಉತ್ತಮ ಹಿಡಿತವನ್ನು ಹೊಂದಿದ್ದಾರೆ. ಜೊತೆಗೆ, ಸೋನಿಯಾ ಗಾಂಧಿ ಕುಟುಂಬದ ಜೊತೆಗೂ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಈಗ, ಮುಖ್ಯಮಂತ್ರಿಗಳು ಕೂಡಾ ರಿಜಿಡ್ ನಿಲುವಿನಿಂದ ಸಾಫ್ಟ್ ಆಗಿದ್ದಾರೆ ಎನ್ನುವ ಸುದ್ದಿಯ ನಡುವೆ, ಹರಿಪ್ರಸಾದ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *