ಬಾಗಲಕೋಟೆ: ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ನಡೆದ ಲಾಠಿ ಚಾರ್ಜ್ನಿಂದ ಪಂಚಮಸಾಲಿ ಸಮಾಜ ನೊಂದಿದೆ. ಸರ್ಕಾರ ಸಮಾಜದ ಕ್ಷಮೆ ಕೇಳಿಲ್ಲ, ಲಾಠಿ ಚಾರ್ಜ್ ಮಾಡಿದ ಅಧಿಕಾರಿ ಅಮಾನತು ಕೂಡ ಮಾಡಿಲ್ಲ. ಅಧಿವೇಶನದಲ್ಲೇ ಸಿಎಂ ಮೀಸಲಾತಿ ಕೊಡಲ್ಲ ಅಂದಿದ್ದಕ್ಕೆ ಅವಮಾನ ಆಗಿದೆ.
ಹಾಗಾಗಿ ನಾವು 8ನೇ ಹಂತದ ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಗುಡುಗಿದ್ದಾರೆ.
ಮಕರ ಸಂಕ್ರಾಂತಿ ದಿನ ಕೂಡಲ ಸಂಗಮದಲ್ಲಿ ನಡೆದ ಸಭೆಯಲ್ಲಿ ಪ್ರತಿಜ್ಞಾ ವಿಧಿ ಅಭಿಯಾನ ಕೈಗೊಂಡ ಶ್ರೀಗಳು, ಲಾಠಿ ಚಾರ್ಜ್ ವೇಳೆ ಗಾಯಗೊಂಡವರನ್ನು ವೇದಿಕೆಗೆ ಕರೆದು ಸನ್ಮಾನಿಸಿ ಆತ್ಮಸ್ಥೆರ್ಯ ತುಂಬಿದ ಬಳಿಕ ಮಾತನಾಡಿದರು.
2ಎ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಅಪಮಾನಕ್ಕೆ ಪ್ರತೀಕಾರದ ಹೋರಾಟಕ್ಕೆ ಸಜ್ಜಾಗಿದ್ದು, ರಾಜ್ಯದ 224 ವಿಧಾನಸಭೆಗಳ 18,000 ಹಳ್ಳಿಗಳ ಮನೆಮನೆಗೆ ತೆರಳಲು ನಿರ್ಧಾರ ಮಾಡಿದ್ದಾಗಿ ತಿಳಿಸಿದರು.
ಇನ್ಮುಂದೆ ಸಿಎಂ ಬಳಿ ಮೀಸಲಾತಿ ಕೇಳಲು ಹೋಗಲ್ಲ. ಬದಲಾಗಿ ಜನರ ಮನೆಮನೆಗೆ ತೆರಳಿ ಜಾಗೃತಿ ಮಾಡ್ತವೆ. ಸಿಎಂ ಪ್ರತಿನಿಧಿಸುವ ವರುಣಾ ಮತಕ್ಷೇತ್ರದಿಂದಲೇ ಹೋರಾಟಕ್ಕೆ ಮುಂದಾಗುವ ಸೂಚನೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

