ಹುಕ್ಕೇರಿ: ಅಹಿಂದ ಸಮುದಾಯಕ್ಕೆ ಸೇರಿದ ವಕೀಲರು ಆರ್ಥಿಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರಿ, ಅರೆ ಸರ್ಕಾರಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾನೂನು ಸಲಹೆಗಾರರನ್ನು ನೇಮಕ ಮಾಡುವಾಗ ಅವರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಜಿಲ್ಲಾ ಅಹಿಂದ ನ್ಯಾಯವಾದಿಗಳ ಸಂಘದ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಹಿಂದುಳಿದ ಅಲ್ಪಸಂಖ್ಯಾತರ ಸಮುದಾಯದ ವಕೀಲರಿಗೆ ಪ್ರತಿ ತಿಂಗಳು ₹10 ಸಾವಿರದಂತೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಕೀಲರಿಗೆ ಪ್ರತಿ ತಿಂಗಳು ರೂ.20 ಸಾವಿರದಂತೆ 5 ವರ್ಷ ತರಬೇತಿ ಭತ್ಯೆ ನೀಡಬೇಕು. ಚಾಲ್ತಿಯಲ್ಲಿರುವ ತರಬೇತಿ ಭತ್ಯೆ ಪಡೆಯಲು ಆಗುತ್ತಿರುವ ಸಮಸ್ಯೆ ಬಗೆಹರಿಸಬೇಕು. ಲ್ಯಾಪ್ಟಾಪ್ ವಿತರಿಸಬೇಕು. ಕಚೇರಿ ಸ್ಥಾಪನೆಗೆ ₹5 ಲಕ್ಷ ಸಹಾಯಧನ ನೀಡಬೇಕು. ಸರ್ಕಾರ ಅಥವಾ ಸರ್ಕಾರಿ ಸ್ವಾಮ್ಯದ ಇಲಾಖೆಗಳಿಂದ ನಿರ್ಮಿಸುವ ಗೃಹ ಹಾಗೂ ವಸತಿ ಯೋಜನೆಗಳಲ್ಲಿ ಶೇ 27ರಷ್ಟು ಮೀಸಲಾತಿ ನೀಡಬೇಕು. ನೋಟರಿ ಕೋಟಾದಲ್ಲಿ ಅಹಿಂದ ವಕೀಲರಿಗೆ ಪ್ರಾತಿನಿಧ್ಯ ನೀಡಬೇಕು. ನ್ಯಾಯಾಲಯ ಆವರಣದಲ್ಲಿ ನಿರ್ಮಿಸುವ ಸಂಕೀರ್ಣದಲ್ಲಿ ಶೇ. 27ರಷ್ಟು ಮೀಸಲಾತಿ, ಖಾಸತಿ ಹಾಗೂ ಅರೆ ಸರ್ಕಾರಿ ಸ್ವಾಮ್ಯದ ಸಂಘ ಹಾಗೂ ಸಂಸ್ಥೆಗಳಲ್ಲಿ ಅಹಿಂದ್ ಮಹಿಳಾ ನ್ಯಾಯವಾದಿಗಳಿಗೆ ಶೇ 27ರಷ್ಟು ಮೀಸಲಾತಿ ನೀಡಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು.
ವಕೀಲರಾದ ಎನ್.ಆರ್.ಲಾತೂ, ಭೀಮಸೇನ ಬಾಗಿ, ಕೆ.ಪಿ ಶಿರಗಾಂಕರ, ಫಿರೋಜ್ ಮಕಾನದಾರ, ಸುರೇಶ ಕಾಂಬಳೆ, ಭರಮಣ್ಣ ತೋಳಮರಡಿ, ಎಸ್.ಸಿ. ನದಾಫ, ರೇವಣ್ಣ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

