Breaking News

ಅಭಿವೃದ್ದಿ ಕೆಲಸಗಳಿಗಾಗಿ 48,000 ಕೋಟಿ ರೂ. ಸಾಲ ಮಾಡಲು ಯೋಜಿಸಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ತೆರಿಗೆ ಆದಾಯವನ್ನು ಪಂಚಗ್ಯಾರಂಟಿ, ಬದ್ಧ ವೆಚ್ಚಕ್ಕಾಗಿ ಬಳಕೆ ಮಾಡುತ್ತಿದೆ. ಇತ್ತ ಅಭಿವೃದ್ಧಿಗಾಗಿನ ಬಂಡವಾಳ ವೆಚ್ಚಕ್ಕಾಗಿ ಸಂಪೂರ್ಣ ಸಾಲವನ್ನೇ ನೆಚ್ಚಿಕೊಂಡಿದೆ. ಹೀಗಾಗಿ ಮುಂದಿನ ಮೂರು ತಿಂಗಳಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸಗಳಿಗಾಗಿ 48,000 ಕೋಟಿ ರೂ.ಸಾಲ ಮಾಡಲು ಯೋಜಿಸಿದೆ. ಆರ್ಥಿಕ ವರ್ಷದ ಮುಕ್ಕಾಲು ಭಾಗ ಪೂರ್ಣವಾಗಿದೆ. ಕೊನೆಯ ತ್ರೈಮಾಸಿಕ ಚಾಲ್ತಿಯಲ್ಲಿದೆ.
ಕಾಂಗ್ರೆಸ್‌‍ ಸರ್ಕಾರ ಪಂಚ ಗ್ಯಾರಂಟಿ ಕೇಂದ್ರಿತ ಆಡಳಿತ ನಡೆಸುತ್ತಿದೆ. ತನ್ನ ಸ್ವಂತ ತೆರಿಗೆ ಆದಾಯದ ಬಹುಪಾಲನ್ನು ಪಂಚ ಗ್ಯಾರಂಟಿಗಾಗಿ ಬಳಸುತ್ತಿದೆ ಹಾಗೂ ಬದ್ಧ ವೆಚ್ಚಕ್ಕೆ ಬಳಸಲಾಗುತ್ತಿದೆ. ಇನ್ನು ರಾಜ್ಯದ ಆಸ್ತಿ ಸೃಜಿಸುವ ಅಭಿವೃದ್ಧಿ ವೆಚ್ಚಕ್ಕಾಗಿ ರಾಜ್ಯ ಸಂಗ್ರಹಿಸುವ ತೆರಿಗೆ ಆದಾಯದ ಹಣ ಸಾಲುತ್ತಿಲ್ಲ. ಹೀಗಾಗಿ ಅಭಿವೃದ್ಧಿ ವೆಚ್ಚಕ್ಕಾಗಿ ರಾಜ್ಯ ಸರ್ಕಾರ ಸಾಲವನ್ನೇ ನೆಚ್ಚಿಕೊಂಡಿದೆ. ಒಟ್ಟು ನಾಲ್ಕು ಪ್ರಮುಖ ತೆರಿಗೆಗಳ ಮೂಲಕ ಡಿಸೆಂಬರ್‌ವರೆಗೆ 1,25,101 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಗಳಿಸಿದ ಆದಾಯವೆಲ್ಲವೂ ರಾಜಸ್ವ ವೆಚ್ಚಕ್ಕೆ ವ್ಯಯವಾಗುತ್ತಿದೆ. ಈ ಬಾರಿ ಅಭಿವೃದ್ಧಿ ಕಾಮಗಾರಿಗಳಿಗಾಗಿನ ಬಂಡವಾಳ ವೆಚ್ಚಕ್ಕೆ 55,877 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ರಾಜ್ಯ ಸರ್ಕಾರ ನವೆಂಬರ್‌ವರೆಗೆ ಮೂಲಸೌಕರ್ಯ ಅಭಿವೃದ್ಧಿ ಸೇರಿ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು 21,493 ಕೋಟಿ ರೂ. ಖರ್ಚು ಮಾಡಿದೆ.
ಈ ಅಭಿವೃದ್ಧಿ ವೆಚ್ಚಕ್ಕೆ ರಾಜ್ಯ ಸರ್ಕಾರ ಬಹುವಾಗಿ ಸಾಲವನ್ನೇ ಬಳಸಿಕೊಂಡಿದೆ. ಇನ್ನು ಉಳಿದಿರುವ ಮೂರು ತಿಂಗಳಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ವೆಚ್ಚಕ್ಕಾಗಿ ಇನ್ನೂ ಹೆಚ್ಚಿನ ಸಾಲ ಮಾಡಲಿದೆ. ಡಿಸೆಂಬರ್‌ವರೆಗೆ 53,000 ಕೋಟಿ ರೂ. ಸಾಲ ಎತ್ತುವಳಿ ರಾಜ್ಯ ಸರ್ಕಾರ 2024-25 ಸಾಲಿನಲ್ಲಿ ಅಂದಾಜು 1,05,246 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. ಅದರಂತೆ ಕೇಂದ್ರ ಸರ್ಕಾರದಿಂದ 6,855 ಕೋಟಿ ರೂ. ಸಾಲ ಪಡೆಯಲು ಅಂದಾಜಿಸಲಾಗಿದೆ.
ಬಹಿರಂಗ ಮಾರುಕಟ್ಟೆ ಮೂಲಕ 96,840 ಕೋಟಿ ರೂ. ಸಾಲ ಮಾಡಲು ಮುಂದಾಗಿದೆ. ಇನ್ನು ಈಗಾಗಲೇ ಡಿಸೆಂಬರ್‌ವರೆಗೆ ಆರ್‌ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ 47,000 ಕೋಟಿ ರೂ. ಮತ್ತು ಇತರ ಮೂಲಗಳಿಂದ 6 ಸಾವಿರ ಕೋಟಿ ರೂ. ಸೇರಿ ಒಟ್ಟು 53 ಸಾವಿರ ಕೋಟಿ ರೂ. ಸಾಲ ಮಾಡಿದೆ. ಆರ್ಥಿಕ ವರ್ಷದ ಎರಡು ತ್ರೈಮಾಸಿಕದಲ್ಲಿ ರಾಜ್ಯ ಹೆಚ್ಚಿನ ಸಾಲದ ಮೊರೆ ಹೋಗಿರಲಿಲ್ಲ. ಸಾರ್ವಜನಿಕ ಸಾಲವಾಗಿ ಐದು ತಿಂಗಳಲ್ಲಿ ಸುಮಾರು 7,000 ಕೋಟಿ ರೂ. ಸಾಲ ಮಾಡಿದೆ. ಮೊದಲ ಎರಡು ತ್ರೈಮಾಸಿಕಗಳಲ್ಲಿ ರಾಜ್ಯ ಸರ್ಕಾರ ಆರ್‌ಬಿಐ ಮೂಲಕ ಬಹಿರಂಗ ಸಾಲ ಎತ್ತುವಳಿಗೆ ಹೋಗಿರಲಿಲ್ಲ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸೆ.24ರಿಂದ ಆರ್‌ಬಿಐ ಮೂಲಕ ಸಾಲ ಎತ್ತುವಳಿ ಮಾಡಲು ಆರಂಭಿಸಿತ್ತು.
ಆರ್ಥಿಕ ಇಲಾಖೆ ನೀಡಿದ ಅಂಕಿ-ಅಂಶದಂತೆ ಇತರ ಮೂಲಗಳಿಂದ ರಾಜ್ಯ ಸರ್ಕಾರ ಏಪ್ರಿಲ್‌ ತಿಂಗಳಲ್ಲಿ 660 ಕೋಟಿ ರೂ. ಸಾರ್ವಜನಿಕ ಸಾಲ ಮಾಡಿತ್ತು. ಮೇ ತಿಂಗಳಲ್ಲಿ 1,455 ಕೋಟಿ ರೂ. ಸಾಲ ಮಾಡಲಾಗಿತ್ತು. ಜೂನ್‌ನಲ್ಲಿ ರಾಜ್ಯ 165 ಕೋಟಿ ರೂ. ಸಾರ್ವಜನಿಕ ಸಾಲ ಮಾಡಿದೆ. ಜುಲೈ ತಿಂಗಳಲ್ಲಿ 1,180 ಕೋಟಿ ರೂ, ಆಗಸ್ಟ್‌ ತಿಂಗಳಲ್ಲಿ 540 ಕೋಟಿ ರೂ., ನವೆಂಬರ್‌ ತಿಂಗಳವರೆಗೆ ಒಟ್ಟು 32,884 ಕೋಟಿ ರೂ. ಸಾಲ ಮಾಡಲಾಗಿತ್ತು.
ಆರ್‌ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಹೆಚ್ಚಿನ ಸಾಲ ಎತ್ತುವಳಿ ಮಾಡಲು ಆರಂಭಿಸಿದ ಸರ್ಕಾರ ಡಿಸೆಂಬರ್‌ ತಿಂಗಳಲ್ಲೇ 20,000 ಕೋಟಿ ಸಾಲ ಎತ್ತುವಳಿ ಮಾಡಿದೆ. ಕೊನೆಯ 3 ತಿಂಗಳಲ್ಲಿ 48,000 ಕೋಟಿ ಸಾಲ ಎತ್ತುವಳಿ ರಾಜ್ಯ ಸರ್ಕಾರ ಆರ್ಥಿಕ ವರ್ಷದ ಕೊನೆಯ ಮೂರು ತಿಂಗಳಲ್ಲಿ ಆರ್‌ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ 48,000 ಕೋಟಿ ರೂ. ಸಾಲ ಮಾಡಲಿದೆ. ಆ ಸಾಲದ ಮೊತ್ತವನ್ನು ಅಭಿವೃದ್ಧಿಗಾಗಿ ಬಂಡವಾಳ ವೆಚ್ಚಕ್ಕೆ ಬಳಸಲು ತೀರ್ಮಾನಿಸಿದೆ. ಕೊನೆಯ ತ್ರೈಮಾಸಿಕದಲ್ಲಿ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಿ ಬಂಡವಾಳ ವೆಚ್ಚದ ಗುರಿ ಮುಟ್ಟಲು ಆರ್ಥಿಕ ಇಲಾಖೆ ತೀರ್ಮಾನಿಸಿದೆ. ಅದರಂತೆ ರಾಜ್ಯ ಸರ್ಕಾರ ಆರ್‌ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಕೊನೆಯ ತ್ರೈಮಾಸಿಕದಲ್ಲಿ 48,000 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ಮಾಹಿತಿ ನೀಡಿದೆ. ಆ ರೀತಿ ಜನವರಿಯಲ್ಲಿ 16,000 ಕೋಟಿ ರೂ., ಫೆಬ್ರವರಿಯಲ್ಲಿ 16,000 ಕೋಟಿ ರೂ. ಹಾಗೂ ಮಾರ್ಚ್‌ನಲ್ಲಿ 16,000 ಕೋಟಿ ರೂ. ಸಾಲ ಮಾಡಲು ಮುಂದಾಗಿದೆ. ವಿತ್ತೀಯ ಹೊಣೆಗಾರಿಕೆಯ ಮಿತಿ ಮೀರದಂತೆ ಸಾಲ ಮಾಡಲಾಗುವುದು ಎಂದು ಆರ್ಥಿಕ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *