ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹಸುಗೂಸುಗಳನ್ನು ನಿರ್ಜನ ಪ್ರದೇಶದಲ್ಲಿ, ಬೀದಿಗಳಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮೂರು ದಿನಗಳ ಕಂದಮ್ಮನನ್ನು ರಸ್ತೆ ಪಕ್ಕದಲ್ಲಿ ಬಿಟ್ತು ಹೋಗಿರುವ ಮನಕಲಕುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.ಶಿವಮೊಗ್ಗದ ಭದ್ರವಾತಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನವಜಾತ ಶಿಶುವನ್ನು ರಸ್ತೆ ಬದಿ ಬಿಟ್ಟು ಹೋಗಿದ್ದಾರೆ. ಕುಶ ಎಂಬುವವರು ತಮ್ಮ ಮಗನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಾಪಸ್ ಊರಿಗೆ ತೆರಳುತ್ತಿದ್ದಾಗ ಮೂತ್ರ ವಿಸರ್ಜನೆಗೆಂದು ಮಲ್ಲಾಪುರ ಬಳಿ ವಾಹನ ನಿಲ್ಲಿಸಿದ್ದಾರೆ. ಈ ವೇಳೆ ರಸ್ತೆ ಬದಿ ಮಗು ಅಳುತ್ತಿರುವ ಶಬ್ಧ ಕೇಳಿ ಕೆಲ ಕಾಲ ಶಾಕ್ ಆಗಿದ್ದಾರೆ. ನಿರ್ಜನ ಪ್ರದೇಶದಲ್ಲಿ ರಸ್ತೆ ಬಳಿ ಕಲ್ಲು-ಮುಳ್ಳುಗಳ ನಡುವೆ ಕಂದಮ್ಮ ಅಳುತ್ತಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ಮಗುವಿನ ಪೋಷಕರಿಗಾಗಿ ಸುತ್ತಮುತ್ತ ಹುಡುಕಿದರೂ ಯಾರ ಸುಳಿವೂ ಇರಲಿಲ್ಲ. ನವಜಾತ ಶಿಶುವನ್ನು ಹೊಳೆಹೊನ್ನೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

