ಶಿರಸಿ: ದಾಂಡೇಲಿ ನಗರದ ಹಿರಿಯ ವಕೀಲ ಅಜಿತ ನಾಯ್ಕ ಅವರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪಾಂಡುರಂಗ ಮಾರುತಿ ಕಾಂಬಳೆ ಅಲಿಯಾಸ್ ದೀಪ್ಯಾನಿಗೆ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಕೋರ್ಟ್ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶ ಕಿರಣ ಕಿಣಿ ಅವರು ಅಪರಾಧಿಗೆ ಶಿಕ್ಷೆಯೊಂದಿಗೆ ₹25 ಸಾವಿರ ದಂಡ ಹಾಗೂ ಮೃತರ ಕುಟುಂಬಕ್ಕೆ ₹50 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.ಜಮೀನಿನ ವಿಚಾರದಲ್ಲಿ ರಾಮಕುಮಾರ ಮಾಳಗೆ ಪರವಾಗಿ ವಕೀಲ ಅಜಿತ ನಾಯ್ಕ ವಕಾಲತ್ತು ವಹಿಸಿದ್ದರು. ಇದನ್ನು ಪಾಂಡುರಂಗ ಕಾಂಬಳೆ ಹಾಗೂ ಸಹಚರರು ಸಹಿಸಿರಲಿಲ್ಲ. ಜಮೀನನ್ನು ವಶಪಡಿಸಿಕೊಳ್ಳಲು ಯತ್ನಿಸಿದ ಕಾರಣದಿಂದ ಪಾಂಡುರಂಗ ಕಾಂಬಳೆ ಎರಡು ಬಾರಿ ಜೈಲಿಗೆ ಹೋಗಿದ್ದ. ತನಿಖೆಯ ವೇಳೆ ಜೈಲಿನಲ್ಲಿದ್ದಾಗಲೇ ಕೊಲೆಗೆ ಸಂಚು ರೂಪಿಸಿದ್ದು ಬಹಿರಂಗವಾಗಿತ್ತು. ವಿಶೇಷವಾಗಿ, ಆರೋಪಿ ನಡೆಸಿದ್ದ ಮೊಬೈಲ್ ಕರೆಗಳ ಧ್ವನಿ ಮಾದರಿಯು ಎಫ್.ಎಸ್.ಎಲ್ ವರದಿಯಲ್ಲಿ ಹೊಂದಾಣಿಕೆಯಾಗಿದ್ದು ಈ ಪ್ರಕರಣದ ನಿರ್ಣಾಯಕ ಸಾಕ್ಷ್ಯವಾಗಿತ್ತು. ಸಿಪಿಐ ಅನಿಸ್ ಮುಜಾವರ ನೇತೃತ್ವದ ತಂಡ ಸಂಗ್ರಹಿಸಿದ ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ ವಾದ ಮಂಡಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

