Breaking News

ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರೋದು ಬೆಟರ್’: ಮಾತೃ ಇಲಾಖೆ ವಿರುದ್ಧವೇ ಸ್ಟೇಟಸ್ ಹಾಕಿದ ಕೊಪ್ಪಳದ ಪೇದೆ!

ಕೊಪ್ಪಳ (ಫೆ.02): ‘ವರ್ಷದ 365 ದಿನವೂ ಕೆಲಸ, ಒಂದು ದಿನವೂ ರಜೆ ಇಲ್ಲ. ಇಂತಹ ಪೊಲೀಸ್ ಕೆಲಸ ಮಾಡುವುದಕ್ಕಿಂತ ರಸ್ತೆಯಲ್ಲಿ ನಿಂತು ಎಗ್ ರೈಸ್ ಮಾರಿ ಬದುಕುವುದು ಎಷ್ಟೋ ಉತ್ತಮ…’ ಹೀಗೆಂದು ತಮ್ಮದೇ ಮಾತೃ ಇಲಾಖೆಯ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಹಾಕಿರುವ ವಾಟ್ಸಾಪ್ ಸ್ಟೇಟಸ್ ಈಗ ಇಡೀ ರಾಜ್ಯದ ಗಮನ ಸೆಳೆದಿದೆಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರ ಪೊಲೀಸ್ ಠಾಣೆಯ ಪೇದೆ ಬ್ರಹ್ಮಾನಂದ ಅವರೇ ಈ ಸ್ಟೇಟಸ್ ಹಾಕುವ ಮೂಲಕ ಸುದ್ದಿಯಾದವರು. ಇತ್ತೀಚೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG-IGP) ಡಾ. ಎಂ.ಎ. ಸಲೀಂ ಅವರು ರಾಜ್ಯದಲ್ಲಿ ಖಾಲಿ ಇರುವ 8,300 ಪೊಲೀಸ್ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಮಾಡಿಕೊಳ್ಳಲಾಗುವುದು ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತ್ಯುತ್ತರ ಎಂಬಂತೆ ಪೇದೆ ಬ್ರಹ್ಮಾನಂದ ತಮ್ಮ ವಾಟ್ಸಾಪ್ ಸ್ಟೇಟಸ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಹೊಸದಾಗಿ ಇಲಾಖೆಗೆ ಸೇರಬಯಸುವ ಯುವಕರಿಗೆ ಎಚ್ಚರಿಕೆ ನೀಡುವ ಧಾಟಿಯಲ್ಲಿ, ‘ಪೊಲೀಸ್ ಠಾಣೆಗೆ ಬರುವ ಮುಂಚೆ ನೂರು ಬಾರಿ ಯೋಚನೆ ಮಾಡಿ, ಇದಕ್ಕಿಂತ ಬೇರೆ ಇಲಾಖೆಗೆ ಹೋಗುವುದು ಉತ್ತಮ’ ಎಂದು ಸಲಹೆ ನೀಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿನ ಕೆಲಸದ ಒತ್ತಡ ಮತ್ತು ರಜೆ ರಹಿತ ದುಡಿಮೆಯ ಬಗ್ಗೆ ನೊಂದುಕೊಂಡಿರುವ ಬ್ರಹ್ಮಾನಂದ, ‘ವರ್ಷದ 365 ದಿನವೂ ಇಲ್ಲಿ ಡ್ಯೂಟಿ ಮಾಡಬೇಕು. ಹಬ್ಬ ಹರಿದಿನ ಎನ್ನದೆ ದುಡಿದರೂ ನೆಮ್ಮದಿ ಇಲ್ಲ. ಇದರ ಬದಲು ಎಗ್ ರೈಸ್ ಮಾರಿ ಬದುಕುವುದು ಎಷ್ಟೋ ವಾಸಿ’ ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ. ಸಾರ್ವಜನಿಕರ ರಕ್ಷಣೆ ಮಾಡುವ ಪೊಲೀಸರೇ ತಮ್ಮ ವೃತ್ತಿ ಬದುಕಿನ ಬಗ್ಗೆ ಇಷ್ಟು ಹತಾಶೆಗೊಂಡು ಸ್ಟೇಟಸ್ ಹಾಕಿರುವುದು ಇಲಾಖೆಯಲ್ಲಿನ ಕೆಳಹಂತದ ಸಿಬ್ಬಂದಿಯ ಮಾನಸಿಕ ಒತ್ತಡಕ್ಕೆ ಕನ್ನಡಿ ಹಿಡಿದಂತಿದೆ. ಪೊಲೀಸ್ ಇಲಾಖೆ ಎಂದರೆ ಶಿಸ್ತಿನ ಇಲಾಖೆ. ಇಲ್ಲಿನ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಪ್ರತ್ಯೇಕ ವೇದಿಕೆಗಳಿವೆ. ಆದರೆ, ಪೇದೆ ಬ್ರಹ್ಮಾನಂದ ಅವರು ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಇಲಾಖೆಯ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿರುವುದು ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರಿ ನೌಕರರಾಗಿ, ಅದರಲ್ಲೂ ಸಮವಸ್ತ್ರ ಧರಿಸುವ ಸಿಬ್ಬಂದಿ ಹೀಗೆ ಸಾರ್ವಜನಿಕವಾಗಿ ಇಲಾಖೆಯನ್ನು ಟೀಕಿಸುವುದು ಶಿಸ್ತು ಉಲ್ಲಂಘನೆಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ವಾಟ್ಸಾಪ್ ಸ್ಟೇಟಸ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ರಾಮ್ ಎಲ್. ಅರಸಿದ್ದಿ ಅವರು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪೇದೆ ಬ್ರಹ್ಮಾನಂದ ಅವರ ವರ್ತನೆಗೆ ಸಂಬಂಧಿಸಿದಂತೆ ಮತ್ತು ಅವರು ಎತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತನಿಖಾ ವರದಿ ಬಂದ ಬಳಿಕ ಪೇದೆಯ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಾರೆಯಾಗಿ, ಪೊಲೀಸ್ ಪೇದೆಯೊಬ್ಬರ ಈ ‘ಎಗ್ ರೈಸ್’ ಸ್ಟೇಟಸ್, ಪೊಲೀಸ್ ಸಿಬ್ಬಂದಿಯ ಕೆಲಸದ ಒತ್ತಡ, ರಜೆಗಳ ಲಭ್ಯತೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *