ಮಂಗಳೂರು ನಗರದ ಲ್ಯಾಂಡ್ ಲಿಂಕ್ಸ್ ನ ಅಪಾರ್ಟ್ ಮೆಂಟ್ ಒಂದರ ನಿವಾಸಿ, ಬ್ಯಾಂಕ್ ಉದ್ಯೋಗಿ ಮಂಜಪ್ಪ ಸುರೇಂದ್ರನ್ ಬಂಧನಕ್ಕೊಳಗಾದ ವ್ಯಕ್ತಿ. ಮನೆಯ ಪಕ್ಕದಲ್ಲಿ ಶಟಲ್ ಆಟ ಆಡುತ್ತಿದ್ದ ಯುವಕರ ಬಗ್ಗೆ ಮಂಜಪ್ಪ ಕಾವೂರು ಪೊಲೀಸರಿಗೆ ದೂರವಾಣಿ ಮೂಲಕ ಆಗಾಗ್ಗೆ ಫೋನ್ ಮಾಡಿ ದೂರು ನೀಡಿದ್ದ. ಸಂಜೆ ಹೊತ್ತು ಯುವಕರು ತಮ್ಮ ಪಾಡಿಗೆ ಶಟಲ್ ಆಡುತ್ತಿದ್ದಾಗ, ತನಗೆ ನಿದ್ರೆ ಮಾಡಲು ತೊಂದರೆ ಆಗುತ್ತಿದೆ ಎಂದು ಬೊಬ್ಬೆ ಹಾಕಿ ಪತ್ನಿಯ ಜತೆಗೆ ಕಾವೂರು ಪೊಲೀಸ್ ಠಾಣೆಗೆ ಹೋಗಿದ್ದ. ತನ್ನ ದೂರನ್ನು ದಾಖಲಿಸಬೇಕು, ಇಲ್ಲವಾದಲ್ಲಿ ಪೊಲೀಸ್ ಕಮಿಷನರ್ ಅವರ ಬಳಿ ಹೋಗುವೆ ಎಂದು ಪೊಲೀಸ್ ಸಿಬಂದಿಗೆ ಬೆದರಿಕೆ ಹಾಕಿದ್ದಾನೆ. ಆತನ ಕುಡಿತದ ಮತ್ತಿನಲ್ಲಿ ಇರುವುದನ್ನು ಪೊಲೀಸರು ಗಮನಿಸಿದ್ದು, ತಕ್ಷಣ ಇದನ್ನು ಅರಿತ ಆರೋಪಿ ಪತ್ನಿಯ ಜತೆಗೆ ತಾನು ಬಂದಿದ್ದ ಸ್ಕೂಟರಿನಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ. ಪಚ್ಚನಾಡಿ ಬಳಿ ಆತನನ್ನು ವಶಕ್ಕೆ ಪಡೆದ ಪೊಲೀಸರು, ಆತನ ಪತ್ನಿಯನ್ನು ಪೊಲೀಸ್ ಜೀಪಿನಲ್ಲಿ ಮನೆಗೆ ಸುರಕ್ಷಿತವಾಗಿ ಮನೆಗೆ ಬಿಟ್ಟಿದ್ದಾರೆ. ಪೊಲೀಸ್ ವಶದಲ್ಲಿ ಇದ್ದ ಆರೋಪಿ ಪೊಲೀಸರಿಗೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ‘ನೀವು ಹಣ ಕೊಟ್ಟು ಪೊಲೀಸ್ ಇಲಾಖೆಗೆ ಸೇರಿದ್ದೀರಿ, ನಿಮ್ಮನ್ನು ಇಲಾಖೆಯಲ್ಲಿ ಇಲ್ಲದಂತೆ ಮಾಡುವೆ’ ಎಂದು ಬೆದರಿಸಿದ್ದಾನೆ. ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

