ತುಮಕೂರು : ಪೂಜೆ ಮಾಡಿಸಲು ಗ್ರಾಮದ ಗುಡಿಗೆ ಹೋದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮೈಮೇಲೆ ದೇವರು ಬಂದಂತೆ ನಟಿಸಿ, ದಲಿತ ಸಮುದಾಯಕ್ಕೆ ಸೇರಿದ ನವ ದಂಪತಿಗಳನ್ನು ಗುಡಿಯಿಂದ ಹೊರಗೆ ಕಳುಹಿಸಿರುವ ಘಟನೆ ತುರುವೇಕೆರೆ ತಾಲ್ಲೂಕಿನ ಗೋಣಿ ತುಮಕೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೆಪಿಟಿಸಿಎಲ್ ನೌಕರ ಜಗದೀಶ್ ಎಂಬವರು ಇತ್ತೀಚೆಗೆ ವಿವಾಹವಾಗಿದ್ದ ತನ್ನ ತಂಗಿ ಹಾಗೂ ಆಕೆಯ ಪತಿಯನ್ನು ಗ್ರಾಮದ ಆದಿಶಕ್ತಿ ಅರಸಮ್ಮ ದೇವಾಲಯಕ್ಕೆ ಪೂಜೆ ಸಲ್ಲಿಸಲು ಕರೆದುಕೊಂಡು ಹೋಗಿದ್ದರು. ಈ ವೇಳೆ ದೇವಾಲಯದ ಒಳಪ್ರವೇಶಿಸಿದ ಅವರು, ಪೂಜೆಗೆ ತಾವು ತಂದಿದ್ದ ಪೂಜಾ ಸಾಮಗ್ರಿಗಳನ್ನು ನೀಡಿದಾಗ, ದೇವಾಲಯದ ಒಳಗಿದ್ದ ನಾರಾಯಣಪ್ಪ ಮೈಮೇಲೆ ದೇವರು ಬಂದಂತೆ ನಟಿಸಿ, ʼನೀವು ಕೆಳ ಜಾತಿಯವರು ದೇವಾಲಯದ ಒಳಬರಬಾರದು, ಹೊರ ನಡೆಯಿರಿʼ ಎಂದು ಕೈಸನ್ನೆ ಮಾಡುತ್ತಲೇ ಹೊರಗೆ ಕಳುಹಿಸಿದ್ದಾರೆ. ದೇವಾಲಯದಲ್ಲಿದ್ದ ಇತರೆ ಜನರು ಸಹ ಇದನ್ನು ತಡೆಯುವ ಬದಲು, ನಾರಾಯಣಪ್ಪನ ಕೆಲಸಕ್ಕೆ ನಕ್ಕು ಬೆಂಬಲ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನಾರಾಯಣಪ್ಪ ಸೇರಿದಂತೆ ಐವರ ವಿರುದ್ದ ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ನಾರಾಯಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

