ಬಳ್ಳಾರಿ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಬೀರಬ್ಬಿಯಲ್ಲಿ ಯುವಕನ ಭೀಕರ ಕೊಲೆ ನಡೆದಿದೆ. ಕೊಲೆ ಮಾಡಿದ ಆರೋಪಿಗಳು ಯುವಕನ ದೇಹ ಭಾಗವನ್ನು ಹಲವು ಭಾಗಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲಕ್ಕೆ ತುಂಬಿ ದೂರ ಎಸೆದು ಪರಾರಿಯಾಗಿದ್ದಾರೆ. 25 ವರ್ಷದ ಬೀರೇಶ್ ಕೊಲೆಯಾದ ಯುವಕ. ಬೀರೇಶ್ ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದ. ಕಾಣೆಯಾಗಿದ್ದ ಬೀರೇಶ್ಗಾಗಿ ಆತನ ಕುಟುಂಬದವರು ಹುಡುಕಾಟ ನಡೆಸಿದ್ದರು. ಆದರೆ ನಿನ್ನೆ ಸಂಜೆ ಆತನ ಶವ ಮನೆಯ ಹಿಂಭಾಗದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಡು ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಾಣಿ ಸತ್ತಂತೆ ವಾಸನೆ ಬರುತ್ತಿದೆ ಎಂದು ಕುಟುಂಬದವರು ಮನೆಯ ಹಿಂಭಾಗದಲ್ಲಿ ಪರಿಶೀಲಿಸಿದಾಗ ಬೀರೇಶ್ನ ಮೃತದೇಹ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದೆ. ಶವ ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಪ್ರಾಣಿ ಸತ್ತಂತೆ ವಾಸನೆ ಬರುತ್ತಿತ್ತು. ಮಾಹಿತಿ ತಿಳಿದು ಸ್ಥಳಕ್ಕೆವಿಜಯನಗರ ಎಸ್ಪಿ ಜಾಹ್ನವಿ ದೌಡಾಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಇಷ್ಟೊಂದು ಕ್ರೂರವಾಗಿ ಹತ್ಯೆ ಮಾಡಿದ ಹಿಂದಿನ ಕಾರಣವೂ ಸೇರಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

