ಆನಂದಪುರ: ತಾಲೂಕಿನ ಕರಡಿಮನೆ ಗ್ರಾಮದಲ್ಲಿ ರೈತರೊಬ್ಬರ ಕೊಟ್ಟಿಗೆಯಿಂದ ಎತ್ತು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಆನಂದಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನ ನಡೆದ ಕೇವಲ ಎರಡೇ ದಿನಗಳಲ್ಲಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮಾರ್ಚ್ 17ರಂದು ಕರಡಿಮನೆ ಗ್ರಾಮದ ಸುರೇಶ್ ಎಂಬುವವರ ತೋಟದ ಮನೆಯ ಕೊಟ್ಟಿಗೆಯಲ್ಲಿ ಸುಮಾರು 15 ಸಾವಿರ ಮೌಲ್ಯದ ಎತ್ತನ್ನು ಕಟ್ಟಿಹಾಕಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿದ ಕಳ್ಳರು ಎತ್ತನ್ನು ಅಪಹರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಸುರೇಶ್ ಅವರು ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಆನಂದಪುರ ಪಿಎಸ್ಐ ಪ್ರವೀಣ್ ಅವರ ನೇತೃತ್ವದ ಪೊಲೀಸ್ ತಂಡವು ಮಾರ್ಚ್ 19ರಂದು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮುರುಘಾಮಠದ ಕಬೀರ್, ಇರುವಕ್ಕಿಯ ತೋಳಿಕಲ್ ಗ್ರಾಮದ ನಾಗರಾಜ್ ಹಾಗೂ ದೇವೇಂದ್ರ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

