ನಗರದ ಗೋಪಾಲಗೌಡ ಬಡಾವಣೆಯ ಚಂದನ ಪಾರ್ಕ್ ಸಮೀಪ ಮಾರ್ಚ್ 31ರ ಮಧ್ಯಾಹ್ನ ಒಂದೂವರೆ ವರ್ಷದ ಪುಟ್ಟ ಮಗು ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದೆ. ಮಗು ಶಾಲೆಯಿಂದ ಬಂದ ತನ್ನ ಅಣ್ಣನನ್ನು ಕರೆತರಲು ಪೋಷಕರೊಂದಿಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 18 ತಿಂಗಳ ಮಗು ಆರ್ಯನ್, ತನ್ನ ಅಣ್ಣನನ್ನು ಕರೆತರಲು ಪೋಷಕರೊಂದಿಗೆ ಸ್ಥಳಕ್ಕೆ ಬಂದಿದ್ದ. ಖಾಸಗಿ ಶಾಲಾ ಬಸ್ನಲ್ಲಿ ಅಣ್ಣನ ಬರುವಿಕೆಗೆ ಕುಟುಂಬದೊಂದಿಗೆ ಆರ್ಯನ್ ಕೂಡ ಕಾಯುತ್ತಿದ್ದ. ಈ ವೇಳೆ ಏಕಾಏಕಿ ರಸ್ತೆಯತ್ತ ಓಡಿದ ಮಗುವನ್ನು ಬಸ್ ಚಾಲಕ ಗಮನಿಸದ ಕಾರಣ ಮಗು ಬಸ್ ಚಕ್ರಕ್ಕೆ ಸಿಲುಕಿದೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ವೈದ್ಯರು ಪರಿಶೀಲಿಸಿದಾಗ ಮಗು ಮೃತಪಟ್ಟಿರುವುದಾಗಿ ದೃಢಪಡಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ತಿಳಿದ ಕೂಡಲೇ ಪಶ್ಚಿಮ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಾಲಕನ ನಿರ್ಲಕ್ಷ್ಯವೇ ಕಾರಣವೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

