ಬೆಂಗಳೂರು : ಆಶ್ರಯ ನೀಡಿದ್ದ ಮಾಲಕನ ಮನೆಯಲ್ಲೇ ಕಳ್ಳತನ ಮಾಡಿದ ಪ್ರಕರಣದಡಿ ದಂಪತಿಯನ್ನು ಇಲ್ಲಿನ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಮಲ್ಲಿಕಾರ್ಜುನ್ ನಾಯ್ಡು ಎಂಬುವರ ಮನೆಯಲ್ಲಿ ಕೃತ್ಯ ಎಸಗಿದ್ದ ಐಶ್ವರ್ಯಾ(21) ಹಾಗೂ ಮಣಿಕಂಠ(26) ಬಂಧಿತರು ಎಂದು ಗುರುತಿಸಲಾಗಿದೆ.ಆರೋಪಿಗಳಿಂದ 14 ಲಕ್ಷ ರೂ. ನಗದು, 199 ಗ್ರಾಂ ಚಿನ್ನದ ಆಭರಣಗಳು, 730 ಗ್ರಾಂ ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೂವರೆ ವರ್ಷದ ಪುಟ್ಟ ಮಗುವಿದ್ದ ದಂಪತಿಗೆ ಮಲ್ಲಿಕಾರ್ಜುನ್ ನಾಯ್ಡು ಅವರು 4 ತಿಂಗಳ ಹಿಂದೆ ಮನೆಯಲ್ಲಿ ಕೆಲಸ ನೀಡಿ ಆಶ್ರಯ ನೀಡಿದ್ದರು. ಮಾಲಕರ ನಂಬಿಕೆ ಗಳಿಸಿದ್ದ ಆರೋಪಿಗಳು ಹಂತ ಹಂತವಾಗಿ ಮನೆಯಲ್ಲಿದ್ದ ಹಣ ಮತ್ತು ಒಡವೆಗಳನ್ನು ದೋಚುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಂತ ಹಂತವಾಗಿ ನಗದು, ಚಿನ್ನಾಭರಣ ದೋಚಿದ್ದರು. ಎ.25ರಂದು ಮನೆಯಲ್ಲಿದ್ದ ಚಿನ್ನದ ಒಡವೆಗಳು ನಾಪತ್ತೆಯಾದಾಗ ಅನುಮಾನಗೊಂಡ ಮಾಲಕ ಮಲ್ಲಿಕಾರ್ಜುನ್ ನಾಯ್ಡು ಈ ಬಗ್ಗೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಮನೆಗೆಲಸದ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ. ಸದ್ಯ, ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

