ಕಡಬ: ಆಸ್ತಿ ವಿಷಯಕ್ಕೆ ಸಂಬಂಧಿಸಿದ ಮನಸ್ತಾಪವೊಂದು ವಿಕೋಪಕ್ಕೆ ತಿರುಗಿ, ಐತ್ತೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರನ ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಕುಸಮಾಧರ ಎಂಬಾತನನ್ನು ಬಂಧಿಸಿದ್ದಾರೆ. ಐತ್ತೂರು ಗ್ರಾಮದ ಕೆರ್ಮಾಯಿ ಪಾದೆಮಜಲು ನಿವಾಸಿ ಬೇಬಿ ಹಾಗೂ ಅವರ ಮೈದುನ ಕುಸಮಾಧರ ಅವರಿಗೆ ಆಸ್ತಿ ವಿಷಯದಲ್ಲಿ ಮನಸ್ತಾಪವಿದೆ. ಬೇಬಿ ಅವರ ಪತಿ ನೋಣಯ್ಯ ಹಾಗೂ ಅವರ ಸಹೋದರ ಕುಸುಮಾಧರ ಅಕ್ಕ ಪಕ್ಕದಲ್ಲಿ ವಾಸವಾಗಿದ್ದಾರೆ. ನೋಣಯ್ಯ ಹೊಸ ಮನೆ ಕಟ್ಟಲು ಅಡಿಪಾಯ ಹಾಕಿರುತ್ತಾರೆ. ಕೊಳವೆ ಬಾವಿಯನ್ನೂ ಕೊರೆಸಿದ್ದು, ಉತ್ತಮ ನೀರು ಸಿಕ್ಕಿದೆ. ಆದರೆ ಕುಸುಮಾಧರ ಕೊರೆಸಿದ ಕೊಳವೆ ಬಾವಿಯಲ್ಲಿ ನೀರು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಸೂಯೆಯಿಂದ ಕುಸುಮಾಧರ ಒಂದು ಕ್ಯಾನ್ ನಲ್ಲಿ ಪೆಟ್ರೋಲ್ ತಂದು ಬೇಬಿ ಮೇಲೆ ಎರಚಿ ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಹೆದರಿದ ಬೇಬಿ ಬೊಬ್ಬೆ ಹಾಕಿದಾಗ ಅವರ ಅತ್ತೆ ಹಾಗೂ ನೆರೆಮೆನೆಯವರು ಬಂದಿದ್ದಾರೆ. ಆಗ ಕುಸುಮಾಧರ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

