ಪುತ್ತೂರಿನ ಮುರದಲ್ಲಿ ಬಸ್ಸು ಚಾಲಕನೋರ್ವನಿಗೆ ಆಟೋ ರಿಕ್ಷಾ ಚಾಲಕ ಹಾಗೂ ಇತರ ಮೂವರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ಮೇ 6ರಂದು ನಡೆದಿದೆ. ಪುತ್ತೂರು ಸಾಮೆತ್ತಡ್ಕ ನಿವಾಸಿ ರಾಕೇಶ್ ಡಿಸೋಜ ಹಲ್ಲೆಗೊಳಗಾದವರು. ಅವರು ಖಾಸಗಿ ಬಸ್ಸಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಮೇ 6ರಂದು ಬಸ್ಸನ್ನು ಚಲಾಯಿಸಿಕೊಂಡು ವಿಟ್ಲದಿಂದ ಮದುವೆ ದಿಬ್ಬಣವನ್ನು ಮಡಿಕೇರಿಗೆ ಕರೆದುಕೊಂಡು ಹೋಗುತ್ತಿದ್ದರು. ಬಸ್ಸು ಉರಿಮಜಲಿಗೆ ತಲುಪಿದಾಗ ಮುಂದೆ ಹೋಗುತ್ತಿದ್ದ ಆಟೋವನ್ನು ಅದರ ಚಾಲಕ ಏಕಾಏಕಿ ನಿಲ್ಲಿಸಿರುವುದನ್ನು ಬಸ್ಸು ಚಾಲಕ ರಾಕೇಶ್ ಪ್ರಶ್ನಿಸಿದ್ದರು. ಅದೇ ಕೋಪದಿಂದ ಮುರದಲ್ಲಿ ಬಸ್ಸಿಗೆ ರಿಕ್ಷಾವನ್ನು ಅಡ್ಡ ನಿಲ್ಲಿಸಿ ತಡೆದು ಚಾಲಕನನ್ನು ಬಸ್ಸಿನಿಂದ ಇಳಿಯುವಂತೆ ಹೇಳಿ ಅವಾಚ್ಯ ಶಬ್ದಗಳಿಂದ ಬೈದು ರಿಕ್ಷಾ ಚಾಲಕ ಹಾಗೂ ಇತರ ಮೂವರು ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ರಾಕೇಶ್ ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

