ಮೈಸೂರು: ರೈಲು ನಿಲ್ದಾಣದಲ್ಲಿದ್ದ ಪಶ್ಚಿಮ ಬಂಗಾಳದ ಪ್ರಯಾಣಿಕರನ್ನು ನಿಯಮಬಾಹಿರವಾಗಿ ತಡೆದು ವಿಚಾರಣೆ ನಡೆಸಿದ ಹಿಂದೂ ಜಾಗರಣ ವೇದಿಕೆಯ ಆರು ಜನರ ವಿರುದ್ಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಭಾನುವಾರ ರೈಲು ನಿಲ್ದಾಣದೊಳಗೆ ತೆರಳಿ ಪ್ರಯಾಣಿಕರನ್ನು ತಡೆದು ನೀವು ಎಲ್ಲಿಯವರು, ನಿಮ್ಮಲ್ಲಿ ದಾಖಲೆ ಏನಿವೆ ಎಂದು ಪ್ರಶ್ನಿಸಿದ್ದಾರೆ. ಮೈಸೂರಿಗೆ ಕೆಲಸಕ್ಕಾಗಿ ಬರುತ್ತಿದ್ದ ತಂಡವನ್ನು ನೀವು ಬಾಂಗ್ಲಾ ವಲಸಿಗರು, ನಿಮ್ಮ ದಾಖಲೆ ತೋರಿಸಿ ಎಂದು ಬೆದರಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು. ‘ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾದಾಗ ಪೊಲೀಸರು ತೆರಳಿ, ದಾಖಲೆಗಳನ್ನು ಪರಿಶೀಲಿಸಿದಾಗ ಅವರೆಲ್ಲರೂ ಭಾರತೀಯರು ಎಂಬುದು ಸಾಬೀತಾಗಿದೆ. ರೈಲು ಆವರಣಕ್ಕೆ ನುಗ್ಗಿ ನಿಯಮಬಾಹಿರವಾಗಿ ನಡೆದುಕೊಂಡ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದೇವೆ’ ಎಂದರು. ಈ ಕುರಿತ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

