ಮೈಸೂರಿನಲ್ಲಿ ಸಂಬಂಧದ ವಿಚಾರಕ್ಕೆ 40 ವರ್ಷದ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಆರೋಪಿಯೊಬ್ಬ, ಸುಮಾರು 20 ದಿನಗಳ ಬಳಿಕ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಆರೋಪಿ ತಪ್ಪೊಪ್ಪಿಕೊಂಡ ಬಳಿಕವೇ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯ ಅಗಸನಪುರ ಮೂಲದ ಜ್ಯೋತಿ (40) ಮೃತರು. ಪತಿ ಮೃತಪಟ್ಟ ಬಳಿಕ ಸಂಬಂಧಿಕನಾದ ಕನಕಪುರ ಮೂಲದ ಸಿದ್ದರಾಜು (64) ಜೊತೆ ಮೈಸೂರಿನ ಆಶ್ರಯ ಲೇಔಟ್ನಲ್ಲಿ ವಾಸಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ಪದೇಪದೇ ಜಗಳ ನಡೆಯುತ್ತಿದ್ದು, ಜುಲೈ 13ರಂದು ಜಗಳದ ಬಳಿಕ ಜ್ಯೋತಿ ಮಲಗಿದ್ದ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮೂರು ವಾರಗಳ ಬಳಿಕ ಆರೋಪಿ ಆಲನಹಳ್ಳಿ ಠಾಣೆಗೆ ತೆರಳಿ ಶರಣಾದ ಹಿನ್ನೆಲೆಯಲ್ಲಿ ಪೊಲೀಸರು ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ಹಾಸಿಗೆಯ ಕೆಳಗೆ ಕೊಳೆತ ಸ್ಥಿತಿಯಲ್ಲಿ ಜ್ಯೋತಿ ಅವರ ಮೃತದೇಹ ಪತ್ತೆಯಾಯಿತು. ಮನೆ ಮಾಲೀಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

