ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಟಕಿ ತಾಂಡಾದಲ್ಲಿ ಪತಿ-ಪತ್ನಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಪತಿಯೊಬ್ಬ ಸ್ಫೋಟಕ ಬಳಸಿ ಪತ್ನಿ ಹಾಗೂ ಮಕ್ಕಳನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ನಡೆದ ಸ್ಫೋಟದಲ್ಲಿ ಶಿವಲಾಲ್ ಬಲಿರಾಮ ರಾಠೋಡ (49) ಹಾಗೂ ಅವರ 15 ವರ್ಷದ ಮಗಳು ವೀರಾ ಶಿವಲಾಲ್ ರಾಠೋಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ ಸವಿತಾ (40), ಮಗ ಪ್ರಕಾಶ್ (19) ಸೇರಿದಂತೆ ಸಂಬಂಧಿಕರಾದ ಸುರೇಖಾ ಚವ್ಹಾಣ (30), ವಿವೇಕ್ ಚವ್ಹಾಣ (12) ಹಾಗೂ ನಿತೇಶ್ ಗಂಭೀರವಾಗಿ ಗಾಯಗೊಂಡಿದ್ದು, ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವಲಾಲ್ ಮತ್ತು ಸವಿತಾ ನಡುವೆ ಹಲವು ವರ್ಷಗಳಿಂದ ಜಗಳ ನಡೆಯುತ್ತಿತ್ತು. ಇದರಿಂದ ನೊಂದ ಸವಿತಾ ಮಕ್ಕಳೊಂದಿಗೆ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಮಂಗಳವಾರ ಏಕಾಏಕಿ ಸಂಬಂಧಿಕರ ಮನೆಗೆ ನುಗ್ಗಿದ ಶಿವಲಾಲ್, ಸ್ಫೋಟಕವನ್ನು ದೇಹಕ್ಕೆ ಕಟ್ಟಿಕೊಂಡು ಬಾಗಿಲು ಹಾಕಿಕೊಂಡು ಸ್ಫೋಟಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆಗೆ ಮನೆ ಹಾಗೂ ಸುತ್ತಮುತ್ತಲಿನ ಕಟ್ಟಡಗಳಿಗೆ ಹಾನಿಯಾಗಿದ್ದು, ಸ್ಥಳದಲ್ಲಿ ದೇಹದ ಅವಶೇಷಗಳು ಛಿದ್ರವಾಗಿ ಬಿದ್ದಿದ್ದವು. ಆಳಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

