ಬೆಂಗಳೂರು: ರ್ಯಾಪಿಡೋ ಬೈಕ್ ಟ್ಯಾಕ್ಸಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಂಟೀರಿಯರ್ ಡಿಸೈನರ್ ಸನಿ ಕೃಷ್ಣ (32), ಸಂಸ್ಥೆ ವೈದ್ಯಕೀಯ ವೆಚ್ಚ ಭರಿಸುವುದಾಗಿ ಹೇಳಿದ್ದರೂ ಈವರೆಗೆ ಯಾವುದೇ ಹಣ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಜೂನ್ 17ರಂದು ನಡೆದ ಅಪಘಾತದಲ್ಲಿ ರ್ಯಾಪಿಡೋ ಚಾಲಕನ ನಿರ್ಲಕ್ಷ್ಯದಿಂದ ಟ್ರಾಕ್ಟರ್ಗೆ ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದಾಗಿ ಅವರು ತಿಳಿಸಿದ್ದಾರೆ. ಅಪಘಾತದಲ್ಲಿ ಸನಿ ಅವರ 7 ಪಕ್ಕೆಲುಬುಗಳು ಮುರಿದಿದ್ದು, ಗುಲ್ಮವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದೆ. ಮುಖದ ಮೂಳೆಗಳು ಜಜ್ಜಿದ್ದರಿಂದ ಪ್ಲಾಸ್ಟಿಕ್ ಸರ್ಜರಿ ಹಾಗೂ ದವಡೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಚಿಕಿತ್ಸೆಗೆ ₹20 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ. ಆರಂಭದಲ್ಲಿ ಗರಿಷ್ಠ ₹5 ಲಕ್ಷ ವಿಮಾ ಪರಿಹಾರ ನೀಡುವುದಾಗಿ ತಿಳಿಸಿದ್ದ ರ್ಯಾಪಿಡೋ, ಬಳಿಕ ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸುವುದಾಗಿ ಹೇಳಿಕೆ ನೀಡಿತ್ತು. ಆದರೆ, ಈವರೆಗೆ ಸಂಸ್ಥೆಯಿಂದ ಒಂದು ರೂಪಾಯಿಯೂ ಬಂದಿಲ್ಲ ಎಂದು ಸನಿ ಕೃಷ್ಣ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಕಣ್ಣೀರಿಟ್ಟು ಆರೋಪಿಸಿದ್ದಾರೆ. ಸಾರ್ವಜನಿಕವಾಗಿ ಸಹಾಯ ಮಾಡುತ್ತಿರುವುದಾಗಿ ಹೇಳಿ ಸುಳ್ಳು ಪ್ರಚಾರ ಮಾಡದೆ, ನಿಜವಾಗಿಯೂ ನೆರವು ನೀಡುವುದಾದರೆ ಹಣ ಪಾವತಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

