ತುಮಕೂರಿನಲ್ಲಿ ಉರುಳಿಗೆ ಸಿಲುಕಿದ ಚಿರತೆಯನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇದರ ಹಿಂದೆ ವ್ಯವಸ್ಥಿತ ವನ್ಯಜೀವಿ ಬೇಟೆಗಾರರ ತಂಡವಿರುವ ಶಂಕೆ ವ್ಯಕ್ತವಾಗಿದೆ. ಸ್ಥಳ ಪರಿಶೀಲನೆ ವೇಳೆ ಚಿರತೆ ಸೇರಿದಂತೆ ಇತರೆ ವನ್ಯಜೀವಿಗಳ ಕಳೆಬರಹಗಳು ಪತ್ತೆಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಬನ್ನೇರುಘಟ್ಟ ವನ್ಯಜೀವಿ ವಿಭಾಗದ ತಂಡವೂ ತನಿಖೆ ನಡೆಸಿದೆ. ಭದ್ರಾ ಟೈಗರ್ ರಿಸರ್ವ್ನಿಂದ ಕರೆಸಿದ ಡಾಗ್ ಸ್ಕ್ವಾಡ್ ಪರಿಶೀಲನೆ ವೇಳೆ ನಾಲ್ಕೈದು ಉರುಳುಗಳು ಹಾಗೂ ತೋಟವೊಂದರಲ್ಲಿ ಬೇಟೆಗೆ ಬಳಸಲಾಗುತ್ತದೆ ಎನ್ನಲಾದ ವಸ್ತುಗಳು ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಮತ್ತಷ್ಟು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ. ಪತ್ತೆಯಾದ ವನ್ಯಜೀವಿಗಳ ಕಳೆಬರಹದ ಮಾದರಿಗಳನ್ನು FSLಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಯಾವ ಪ್ರಾಣಿಗಳ ಕಳೆಬರಹ ಎಂಬುದು ಹಾಗೂ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಚಿರತೆ ಬೇಟೆಯ ಹಿಂದೆ ದೊಡ್ಡ ಜಾಲವಿದೆಯೇ ಎಂಬ ಬಗ್ಗೆಯೂ ಅರಣ್ಯ ಇಲಾಖೆ ತನಿಖೆ ಚುರುಕುಗೊಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

