ತುಮಕೂರು: ಮನೆಯಲ್ಲಿ ಸಾಂಬಾರು ಮಾಡುವ ವಿಚಾರಕ್ಕೆ ಅಕ್ಕ-ತಂಗಿಯ ನಡುವೆ ನಡೆದ ಸಣ್ಣ ಜಗಳದಿಂದ ಮನನೊಂದ 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ದುಃಖದ ಘಟನೆ ತುಮಕೂರು ನಗರದ ಜಯನಗರದಲ್ಲಿ ನಡೆದಿದೆ. ಹುಲಿಗಮ್ಮ (16) ಮೃತ ಬಾಲಕಿ. ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹುಲಿಗಮ್ಮ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶನಿವಾರ ಮಧ್ಯಾಹ್ನ ಅಡುಗೆ ವಿಚಾರವಾಗಿ ಅಕ್ಕ-ತಂಗಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದರಿಂದ ಮನನೊಂದ ಬಾಲಕಿ ಈ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನಲಾಗಿದೆ. ಕುಟುಂಬ ಮೂಲತಃ ರಾಯಚೂರು ಜಿಲ್ಲೆಯಾಗಿದ್ದು, ಜೀವನೋಪಾಯಕ್ಕಾಗಿ ತುಮಕೂರಿನ ಜಯನಗರದಲ್ಲಿ ವಾಸವಾಗಿತ್ತು. ಘಟನೆ ತಿಳಿಯುತ್ತಿದ್ದಂತೆ ಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

