ಹುಬ್ಬಳ್ಳಿ : ಪಾರಿವಾಳ ಶಾಂತಿಯ ಸಂಕೇತ. ಆದ್ರೆ, ಅದೇ ಪಾರಿವಾಳವೊಂದು ಕುಟುಂಬದ ಶಾಂತಿಗೆ ಭಂಗ ತಂದಿದ್ದು, ಸಹೋದರರಂತಿದ್ದ ಎರಡು ಕುಟುಂಬಗಳು ಇದೀಗ ಶತ್ರುಗಳಾಗಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಾದೃಷ್ಟಕರ ಸಂಗತಿ.ಹೌದು, ದುಡಿದು ಬದುಕು ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಕಾಲು ಮುರಿದುಕೊಂಡು ಆಸ್ಪತ್ರೆಯ ಬೆಡ್ ಮೇಲೆ ಯುವಕನೊಬ್ಬ ಮಲಗಿದ್ರೆ, ಮತ್ತೊಂದೆಡೆ ಆತನ ಕುಟುಂಬದವರು ಭಯದಿಂದ ಬದುಕು ಕಟ್ಟಿಕೊಂಡಿದ್ದ ಮನೆಯನ್ನೇ ಬಿಟ್ಟು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣವಾಗಿರುವುದು ಒಂದು ಪಾರಿವಾಳ ಎನ್ನುವುದು ಮಾತ್ರ ಸತ್ಯ.ಹುಬ್ಬಳ್ಳಿಯ ಮಯೂರ ನಗರದ ನಿವಾಸಿಗಳಾದ ಹಸನ್ ಸಾಬ್ ಬಡೆಖಾನ್ ಮತ್ತು ದಾದಾಫೀರ್ ಕುಟುಂಬದ ನಡುವೆ ಕಳೆದ ಕೆಲವು ದಿನಗಳಿಂದ ಒಂದು ಪಾರಿವಾಳದ ವಿಷಯಕ್ಕೆ ಗಲಾಟೆ ನಡೆಯುತ್ತಿತ್ತು. ಮೊನ್ನೆ ರಾತ್ರಿ ಸಹ ಪಾರಿವಾಳದ ವಿಷಯಕ್ಕೆ ಹಸನ್ ಸಾಬ್ ಬಡೆಖಾನ್ ಅವರ ಮಗನಾದ ಲತೀಪ್ ಬಡೆಖಾನ್ ಮೇಲೆ ಯುವಕರ ಗುಂಪು ಹಲ್ಲೆ ಮಾಡಿದೆ. ಪರಿಣಾಮ ಲತೀಪ್ ಬಡೆಖಾನ್ ಕಾಲು ಮುರಿದಿದೆ. ಲತೀಪ್ ಬಡೆಖಾನ್ನ ಸ್ನೇಹಿತನೊಬ್ಬ ಒಂದು ಪಾರಿವಾಳವನ್ನ ಅವರ ಮನೆಯಲ್ಲಿ ಬಿಟ್ಟು ಹೋಗಿದ್ದ. ಆ ಪಾರಿವಾಳವನ್ನ ಪಕ್ಕದ ಮನೆಯವರಾದ ದಾದಾಫೀರ್ ಮತ್ತು ಸಲೀಂ ಎನ್ನುವವರು ಕಳ್ಳತನ ಮಾಡಿದ್ರು. ಈ ವಿಷಯಕ್ಕೆ ಎರಡು ಕುಟುಂಬದ ನಡುವೆ ಗಲಾಟೆಯಾಗಿ ದಾದಾಫೀರ್ ಕಡೆಯವರ ಮೇಲೆ ಹಲ್ಲೆ ನಡೆದಿದ್ರೆ, ಹಸನ್ ಬಡೆಖಾನ್ಗೆ ಚೂರಿ ಹಾಕಲಾಗಿತ್ತು. ಆ ಘಟನೆ ಬಳಿಕ ಹಸನ್ ಬಡೆಖಾನ್ ಕುಟುಂಬದವರು ಮಯೂರ ನಗರದಲ್ಲಿದ್ದ ತಮ್ಮ ಮನೆ ಬಿಟ್ಟು ಬೇರೆ ಕಡೆ ಆಶ್ರಯ ಪಡೆದಿದ್ದರು. ಆದ್ರೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ಮತ್ತೆ ಹಸನ್ ಬಡೆಖಾನ್ ಕುಟುಂಬದ ಮೇಲೆ ದಾದಾಫೀರ್ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ.ದುರಾದೃಷ್ಟವೆಂದರೆ ಪಾರಿವಾಳ ಆ ಮನೆಗೆ ಬರುವ ಮುನ್ನ ಆ ಎರಡು ಕುಟುಂಬಗಳು ಸಹೋದರರಂತೆ ಬದುಕಿ ಬಾಳುತ್ತಿದ್ದರು. ಇಬ್ಬರ ನಡುವೆ ಯಾವುದೇ ದ್ವೇಷವಿರಲಿಲ್ಲ. ಆದ್ರೆ, ಶಾಂತಿಯ ದ್ಯೋತಕವಾಗಿ ಬರಬೇಕಿದ್ದ ಪಾರಿವಾಳ ಕುಟುಂಬದ ಶಾಂತಿಗೆ ಭಂಗ ತಂದಿದೆ. ಒಂದು ಪಾರಿವಾಳ ಇಷ್ಟೊಂದು ಅವಾಂತರಕ್ಕೆ ಕಾರಣವಾಗಿರುವುದೇ ಆಶ್ಚರ್ಯಕರ ಸಂಗತಿ.ಒಟ್ಟಿನಲ್ಲಿ ಒಂದು ಪಾರಿವಾಳಕ್ಕೆ ಸಂಬಂಧಿಸಿದ ಜಗಳ ಯುವಕನ ಜೀವನಕ್ಕೆ ಕೊಳ್ಳಿಯಿಟ್ಟಂತಾಗಿದೆ. ಒಂದು ನಿಮಿಷದ ಸಿಟ್ಟು ಜೀವಕ್ಕೆ ತಂತು ಕುತ್ತು ಎನ್ನುವುದಕ್ಕೇ ಇದು ತಾಜಾ ಉದಾಹರಣೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





