ಬೆಂಗಳೂರು: ಆ್ಯಂಬಿಡೆಂಟ್ ವಂಚನೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಿದೆ. ಪ್ರಕರಣದಲ್ಲಿ ಬಗೆದಷ್ಟು ಇಂಟರೆಸ್ಟಿಂಗ್ ಮಾಹಿತಿಗಳು ಲಭಿಸುತ್ತಿವೆ. ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣ ಹೇಗೆ ಬೆಳಕಿಗೆ ಬಂತು? ಫರೀದ್ನನ್ನ ಪೊಲೀಸರು ಬಂಧಿಸಿದ್ದು ಹೇಗೆ? ಅಲ್ಲದೇ, ಪೊಲೀಸರು ಮತ್ತು ಫರೀದ್ ನಡುವಿನ ಫೈಟ್ ಹೇಗಿತ್ತು? ಜನಾರ್ದನ ರೆಡ್ಡಿ ಈ ಕೇಸ್ಗೆ ಎಂಟ್ರಿ ಕೊಟ್ಟಿದ್ದು ಹೇಗೆ ಅನ್ನೋದರ ಬಗ್ಗೆ ಫಸ್ಟ್ನ್ಯೂಸ್ಗೆ ಸಂಪೂರ್ಣ ಮಾಹಿತಿ ಲಭಿಸಿದೆ.2017 ರಿಂದ ಸ್ಟಾರ್ಟ್..!ಫರೀದ್ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆ್ಯಂಬಿಡೆಂಟ್ ಕಂಪೆನಿ ತೆರೆದಿದ್ದ. ಜನರಿಗೆ ನೀವು ಹೂಡಿಕೆ ಮಾಡಿದ ಹಣಕ್ಕಿಂತ ಹೆಚ್ಚುವರಿ ಹಣ ನೀಡುವುದಾಗಿ ಆಮಿಷವೊಡ್ಡಿದ್ದ. ಆದ್ರೆ, 2017ರಲ್ಲಿ ಫಾರೂಕ್ ಪಾಷಾ ಅನ್ನೋರು ಕಂಪನಿ ನಮಗೆ ಮೋಸ ಮಾಡಿದೆ ಎಂದು ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ದೂರು ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಡಿಜೆ ಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಮುನಿಕೃಷ್ಣ, ಕೊನೆಗೂ ಫರೀದ್ನನ್ನ ಅರೆಸ್ಟ್ ಮಾಡುತ್ತಾರೆ. ಬಂಧಿತ ಫರೀದ್ನನ್ನ ತನಿಖೆ ನಡೆಸಿ ಒಂದಿಷ್ಟು ಮಹತ್ವದ ಮಾಹಿತಿಗಳನ್ನ ಕಲೆ ಹಾಕುತ್ತಾರೆ. ಅಲ್ಲದೇ, ಫರೀದ್ನನ್ನ ಪರಪ್ಪನ ಅಗ್ರಹಾರಕ್ಕೂ ಕಳುಹಿಸುವಲ್ಲಿ ಯಶಸ್ವಿಯಾಗ್ತಾರೆ. ನಂತರ ಫರೀದ್ ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು ಪಡೆದು ಹೊರ ಬರ್ತಾನೆ. ಅಲ್ಲಿಂದ ಮತ್ತೊಂದು ಆಟ ಶುರು ಮಾಡುತ್ತಾನೆ.ಇನ್ಸ್ಪೆಕ್ಟರ್ ವರ್ಸಸ್ ಫರೀದ್..!ಇಷ್ಟಾದ ಮೇಲೆ ಮತ್ತೆ ಫರೀದ್ ವಿರುದ್ಧ ವಂಚನೆ ಆರೋಪ ಕೇಳಿ ಬರುತ್ತದೆ. ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ಕೆಲವು ನೊಂದವರು ಮತ್ತೆ ದೂರು ನೀಡುತ್ತಾರೆ. ದೂರು ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಮುನಿಕೃಷ್ಣ ಮತ್ತೆ ತನಿಖೆ ಆರಂಭಿಸುತ್ತಾರೆ. ಅಲ್ಲದೇ, ಫರೀದ್ಗೆ ಸಿಕ್ಕಿರುವ ಜಾಮೀನನ್ನು ರದ್ದು ಮಾಡುವಂತೆ ಕೋರಿ ಎಸಿಎಂಎಂ ಕೋರ್ಟ್ಗೆ ಅರ್ಜಿ ಸಲ್ಲಿಸುತ್ತಾರೆ. ಆಗ ಮತ್ತೆ ಫರೀದ್ ಜಾಮೀನು ಪಡೆದು ಹೊರಬರುತ್ತಾನೆ.ಈ ವೇಳೆ ಪ್ರಕರಣದ ತೀವ್ರತೆ ಅರಿತ ಡಿಜೆ ಹಳ್ಳಿ ಪೊಲೀಸರು ನಗರ ಪೊಲೀಸ್ ಆಯುಕ್ತ ಸುನೀಲ್ಕುಮಾರ್ ಗಮನಕ್ಕೆ ತರುತ್ತಾರೆ. ಪ್ರಕರಣದ ಗಂಭೀರತೆ ಅರಿತ ನಗರ ಪೊಲೀಸ್ ಆಯುಕ್ತರು ಪ್ರಕರಣವನ್ನ ಸಿಸಿಬಿಗೆ ಹಸ್ತಾಂತರ ಮಾಡುತ್ತಾರೆ. ಇದರಿಂದ ಆಕ್ರೋಶಗೊಂಡ ಫರೀದ್, ಇನ್ಸ್ಪೆಕ್ಟರ್ ಮುನಿಕೃಷ್ಣ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ. ಹೈಕೋರ್ಟ್ನಲ್ಲಿ ಇನ್ಸ್ಪೆಕ್ಟರ್ ವಿರುದ್ಧ ಮೊಕದ್ದಮೆ ಹೂಡುತ್ತಾನೆ. ವಿನಾಕಾರಣ ಬಂಧಿಸಿ ನನ್ನ ತೇಜೊವಧೆ ಮಾಡಿದ್ದಾರೆ ಎಂದು ಹೈಕೋರ್ಟ್ನಲ್ಲಿ ಮೊಕದ್ದಮೆ ದಾಖಲಿಸುತ್ತಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಇನ್ಸ್ಪೆಕ್ಟರ್ ಮುನಿಕೃಷ್ಣ ನಿತ್ಯ ಕೋರ್ಟ್ಗೆ ಅಲೆಯುವಂತೆ ಮಾಡುತ್ತಾನೆ ಫರೀದ್. ಆದ್ರೆ, ಕೋರ್ಟ್ನ ವಿಚಾರಣೆ ವೇಳೆ ಫರೀದ್ನ ನಿಜ ಬಣ್ಣ ಬಯಲಾಗುತ್ತದೆ. ಇನ್ಸ್ಪೆಕ್ಟರ್ ಮುನಿಕೃಷ್ಣ ಹೈಕೋರ್ಟ್ಗೆ ಪ್ರಕರಣದ ತೀವ್ರತೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತಾರೆ. ನಂತರ ಹೈಕೋರ್ಟ್ ಫರೀದ್ಗೆ ಛೀಮಾರಿ ಕೂಡ ಹಾಕುತ್ತದೆ. ಇಷ್ಟಕ್ಕೆ ಸುಮ್ಮನಾಗದ ಫರೀದ್ ಸುಪ್ರೀಂಕೋರ್ಟ್ ಮೊರೆ ಹೋಗುತ್ತಾನೆ. ಅಷ್ಟು ಮಾತ್ರವಲ್ಲದೇ ತನಿಖೆ ನಡೆಸುತ್ತಿದ್ದ ಮುನಿಕೃಷ್ಣ ಅವರನ್ನ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಿಂದ ಎತ್ತಂಗಡಿ ಮಾಡಿಸಲು ಪ್ಲಾನ್ ಮಾಡಿದ್ದ ಅನ್ನೋ ಆರೋಪವೂ ಇದೆ.ಎತ್ತಂಗಡಿ ಮಾಡುವಂತೆ ಪೊಲೀಸ್ ಆಯುಕ್ತರಿಗೂ ಒತ್ತಡ ಹಾಕಿರುವ ವಿಚಾರವೂ ಗೊತ್ತಾಗುತ್ತದೆ. ಪ್ರಕರಣದ ಸತ್ಯಾಸತ್ಯತೆ ತಿಳಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಡಿಜೆ ಹಳ್ಳಿ ಠಾಣೆಯಲ್ಲೇ ಇನ್ಸ್ಪೆಕ್ಟರ್ ಮುನಿಕೃಷ್ಣಗೆ ಮುಂದುವರೆಯುವಂತೆ ಸೂಚನೆ ನೀಡುತ್ತಾರೆ. ನಂತರದ ದಿನಗಳಲ್ಲಿ ಫರೀದ್ ಮೇಲೆ ಆರ್.ಟಿನಗರ, ಸಂಜಯ್ ನಗರ ವಿದ್ಯಾರಣ್ಯಪುರ ಹೀಗೆ ನಗರದ ಹಲವಾರು ಠಾಣೆಗಳಲ್ಲಿ ಪ್ರಕರಣ ದಾಖಲಾಗುತ್ತೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಆದರೆ ಯಾವುದೇ ಮಹತ್ವದ ಅಂಶ ಸಿಕ್ಕಿರಲಿಲ್ಲ. ಫರೀದ್ ಹಿನ್ನೆಲೆ ಕೆದಕಿದ್ದ ಸಿಸಿಬಿಗೆ ಕೆಲ ರಾಜಕಾರಣಿಗಳ ಹೆಸರು ಕೂಡ ಸಿಕ್ಕಿತ್ತು. ಅದರಲ್ಲಿ ಪ್ರಮುಖರೇ ಈ ಗಾಲಿ ಜನಾರ್ಧನ ರೆಡ್ಡಿ. ತಾಜ್ವೆಸ್ಟ್ ಎಂಡ್ನಲ್ಲಿ ಮೀಟಿಂಗ್ ಮಾಡಿರುವ ಫೋಟೋಗಳು ಲಭ್ಯವಾದ ನಂತರ ಗಾಲಿ ಜನಾರ್ದನ ರೆಡ್ಡಿ ಅವರ ಪಾತ್ರದ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಾರೆ. ಸದ್ಯ ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿಗೆ ಬಲೆ ಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





