ಹಣ ಬಲ, ಜಾತಿ ಬಲ ಇಲ್ಲದಿದ್ದರೂ ಕಿರಿಯ ವಯಸ್ಸಿನಲ್ಲಿಯೇ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ವರ್ಚಸ್ಸು ಮೂಡಿಸಿಕೊಂಡ ವಿಶಿಷ್ಟ ವ್ಯಕ್ತಿತ್ವ ಅನಂತಕುಮಾರ್ ಅವರದು. ಕೇವಲ 36ರ ಹರೆಯದಲ್ಲಿಯೇ ಅಟಲ್ ಬಿಹಾರಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ(1998) ಸಂಪುಟದಲ್ಲಿ ಕ್ಯಾಬಿನೇಟ್ ದರ್ಜೆ ಮಂತ್ರಿ ಪದವಿ ಪಡೆದಿದ್ದ ಅನಂತ್ಕುಮಾರ್ ಅವರನ್ನು ವಿವಾದಗಳು ಮತ್ತು ಹಗರಣಗಳ ಆರೋಪ ಪೀಡಿಸದೇ ಇರಲಿಲ್ಲ. ಹಲವು ಹಗರಣಗಳಲ್ಲಿ ಅನಂತ್ ಕುಮಾರ್ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಅದನ್ನೆಲ್ಲವನ್ನು ಎದುರಿಸಿ ದಿಟ್ಟವಾಗಿ ನಿಂತರು. ಬಿಜೆಪಿಯೂ ಸಹ ತಮ್ಮ ನಾಯಕನ ಬೆನ್ನಿಗೆ ನಿಂತಿತು. ಆ ಹಗರಣಗಳೇನು? ಮತ್ತು ಅವರ ವಿರುದ್ಧದ ಆರೋಪಗಳೇನು ಎನ್ನುವುದರ ವಿವರ ಇಲ್ಲಿದೆ.ನೀರಾ ರಾಡಿಯಾ ಪ್ರಕರಣರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ 2ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಕಾರ್ಪೋರೇಟ್ ಲಾಬಿಗಾರ್ತಿ ನೀರಾ ರಾಡಿಯಾ ಹೆಸರು ಕೇಳಿಬಂದಿತ್ತು. ನೀರಾ ರಾಡಿಯಾ ಅವರು ಉದ್ಯಮಿಗಳು ಮತ್ತು ರಾಜಕೀಯ ಮುಖಂಡರ ಜೊತೆಗೆ ಮಾತನಾಡಿದ ದೂರವಾಣಿ ಸಂಭಾಷಣೆಗಳ ಧ್ವನಿ ಮುದ್ರಿಕೆ ಸೋರಿಕೆಗೊಂಡು ಹಲವು ರಾಜಕೀಯ ನಾಯಕರು ಈ ಪ್ರಕರಣದಲ್ಲಿದ್ದಿದ್ದು ತಿಳಿದುಬಂದಿತ್ತು. ಈ ಪ್ರಕರಣದಲ್ಲಿ ಬಿಜೆಪಿಯ ಅನಂತ್ ಕುಮಾರ್ ಹೆಸರು ಸಹ ತಳಕು ಹಾಕಿಕೊಂಡಿತ್ತು. ಬಿಜೆಪಿ ನಾಯಕ ಅನಂತ್ ಕುಮಾರ್ ಲಾಬಿಗಾರ್ತಿ ನೀರಾ ರಾಡಿಯಾ ಜೊತೆ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಯಿತು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಸಚಿವರಾಗಿದ್ದಾಗ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗುತ್ತಿದ್ದ ಪ್ರಮುಖ ನಿರ್ಧಾರಗಳ ಕುರಿತು ನೀರಾ ರಾಡಿಯಾಗೆ ಮಾಹಿತಿ ನೀಡುತ್ತಿದ್ದಾರೆ ಎಂದು ರಾಡಿಯಾರ ಮಾಜಿ ಪಾಲುದಾರ ರಾವ್ ಧೀರಜ್ ಸಿಂಗ್ ಆರೋಪಿಸಿದ್ದರು. ಈ ಆರೋಪಗಳನ್ನು ಅನಂತ್ ಕುಮಾರ್ ತಳ್ಳಿ ಹಾಕಿದ್ದರು. ಅಲ್ಲದೇ ಇದು ವಿರೋಧ ಪಕ್ಷದ ಷಡ್ಯಂತ್ರ ಎಂದು ಬಿಜೆಪಿ ಕೂಡ ತಿರಸ್ಕರಿಸಿ, ಗಟ್ಟಿಯಾಗಿ ಅನಂತ್ ಕುಮಾರ್ ಬೆನ್ನಿಗೆ ನಿಂತಿತ್ತು. ಇದನ್ನು ಅನಂತ್ ಕುಮಾರ್ ಸಮರ್ಥವಾಗಿ ಎದುರಿಸಿ ರಾಜಕೀಯ ರಂಗದಲ್ಲಿ ಬೆಳೆಯುತ್ತಲೇ ಹೋದರು.ಹುಡ್ಕೋ ಹಗರಣರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿನ ಸಿಪಾಯಿ ಎನಿಸಿಕೊಂಡಿದ್ದ ಅನಂತ್ ಕುಮಾರ್ ಕೇಂದ್ರ ಮಂತ್ರಿಯಾದಗಲೆಲ್ಲಾ ಹಗರಣದ ಕಪ್ಪು ಮಸಿಯನ್ನು ಕೈಗೆ ಮೆತ್ತಿಕೊಳ್ಳುತ್ತಿದ್ದರು. ಬಿಜೆಪಿಯೂ ಸಹ ತಮ್ಮ ನಾಯಕನನ್ನ ಅಷ್ಟೇ ಸಮರ್ಥವಾಗಿ ಸಮರ್ಥಿಸಿಕೊಳ್ಳುವ ಮೂಲಕ ಬೆನ್ನಿಗೆ ನಿಲ್ಲುತ್ತಿತ್ತು. ಎನ್ಡಿಎ ಸರ್ಕಾರದಲ್ಲಿ ಅನಂತ್ ಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದಾಗ ವಸತಿ ಹಾಗೂ ನಗರಾಭಿವೃದ್ಧಿ ಸಂಸ್ಥೆ (ಹುಡ್ಕೋ) ₹14500 ಕೋಟಿಯನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಿತ್ತು. ಈ ಹಗರಣದಲ್ಲಿ ಮುಖ್ಯ ಆರೋಪಿ ಅನಂತ್ ಕುಮಾರ್ ಎನ್ನುವ ಆರೋಪ ಕೇಳಿಬಂದಿತ್ತು. ಅಲ್ಲದೇ ಹಲವು ಕಾಂಗ್ರೆಸ್ ನಾಯಕರ ಹೆಸರುಗಳು ಸಹ ಕೇಳಿಬಂದಿತ್ತು. ಇದನ್ನು ಬಳಸಿಕೊಂಡು ಇಲ್ಲಿಯವರೆಗೂ ವಿರೋಧ ಪಕ್ಷಗಳು ಅನಂತ್ ಕುಮಾರ್ ವಿರುದ್ಧ ಹರಿಹಾಯುತ್ತಿದ್ದವು.ಒಟ್ಟಿನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಅನಂತ್ ಕುಮಾರ್ ಅವರಿಗೆ ಒಲಿದು ಬಂದ ಅದೃಷ್ಟ ಅವರನ್ನು ಎತ್ತರಕ್ಕೆ ಬೆಳೆಸಿತು. ಅಷ್ಟೇ ಬೇಗ ಅವರನ್ನು ಹಗರಣದ ಆರೋಪಗಳು ಬೆಂಬಿಡದೇ ಕಾಡಿದವು. ಕೊನೆಯವರೆಗೂ ಅವರ ಮೇಲಿನ ಆರೋಪಗಳು ಸಾಬೀತಾಗಲಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news





