ಹುಬ್ಬಳ್ಳಿ: ಆ ಮಹಿಳೆಯ ಗಂಡ ಆಸ್ಪತ್ರೆಯೊಂದರಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿರುವ ಸೇವಕ. ಆತನ ಸೇವೆಯನ್ನು ನಂಬಿಕೊಂಡ ಕುಟುಂಬಕ್ಕೆ ಈಗ ಸಂಕಷ್ಟ ಎದುರಾಗಿದೆ. ವೇತನವೂ ಇಲ್ಲದೇ ಅಧಿಕಾರಗಳ ಕಿರುಕುಳಕ್ಕೆ ಬೇಸತ್ತಿರುವ ಕುಟುಂಬ ಈಗ ಆತ್ಮಹತ್ಯೆಗೆ ಮುಂದಾಗುತ್ತಿದೆ.
ಈ ಮಹಿಳೆ ಶಾಂತಾ ಪ್ರಶಾಂತಕುಮಾರ್ ಹೊಸಳ್ಳಿ. ಈ ಮಹಿಳೆಯ ಗಂಡ ಪ್ರಶಾಂತಕುಮಾರ್ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಇಎಸ್ಐ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ಐದಾರೂ ತಿಂಗಳಿಂದ ವೇತನ ಇಲ್ಲದೇ ಕರ್ತವ್ಯ ನಿರ್ವಹಣೆ ಮಾಡುವಂತಾಗಿದೆ. ಇಷ್ಟೆ ಆಗಿದ್ದರೇ ಈ ಕುಟುಂಬ ಹೇಗೋ ನೀರು ಕುಡಿದಾದರೂ ಜೀವನ ನಡೆಸುತ್ತಿತ್ತು. ಆದರೆ ಇಲ್ಲಿ ಆಗಿದ್ದು ಮಾತ್ರ ಬೇರೆಯೇ ಇಲ್ಲಿ ಸಿಬ್ಬಂದಿಯೊಬ್ಬರು ಪ್ರಶಾಂತಕುಮಾರ್ ಗೆ ಕಿರುಕುಳ ನೀಡುತ್ತಿದ್ದು, ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡುವ ಮೂಲಕ ದರ್ಪವನ್ನು ಮೆರೆಯುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿರುವ ಕುಟುಂಬ ಈಗ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಣ್ಣೀರು ಹಾಕುತ್ತಿದ್ದಾರೆ.
ಇನ್ನೂ 2006ರಂದು ಸೇವೆಗೆ ಸೇರಿರುವ ಪ್ರಶಾಂತಕುಮಾರ್ ರಾಜ್ಯದ ಹಲವಾರು ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ ಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿರುವ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯಲ್ಲಿ ಅಧಿಕಾರಿಗಳ ಕಿರುಕುಳ ಹಾಗೂ ಅನಧಿಕೃತವಾಗಿ ವೇತನ ತಡೆಹಿಡಿಯುವ ಮೂಲಕ ಕುಟುಂಬದ ನಿರ್ವಹಣೆ ಜೊತೆಗೆ ಆಟ ಆಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ನೌಕರನ ಹೆಂಡತಿ ಶಾಂತಾ ಈಗ ಸಾಮೂಹಿಕವಾಗಿ ಧರಣಿ ನಡೆಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಧರಣಿಗೂ ಯಾವುದೇ ರೀತಿಯಲ್ಲಿ ಸ್ಪಂದನೆ ಸಿಗದೇ ಇದ್ದಲ್ಲಿ ಆಸ್ಪತ್ರೆಯ ಮುಂದೆಯೇ ಸಾಮೂಹಿಕವಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳ ದರ್ಪವೋ ಅಥವಾ ಇನ್ನಾವುದೇ ಕಾರಣವೋ ಗೊತ್ತಿಲ್ಲ. ಆದರೆ ನೌಕರನ ಕುಟುಂಬ ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಈ ಬಗ್ಗೆ ಕಾರ್ಮಿಕ ಸಚಿವರು ಹಾಗೂ ಸರ್ಕಾರ ಸೂಕ್ತ ರೀತಿಯಲ್ಲಿ ಕ್ರಮಗಳನ್ನು ಜರುಗಿಸಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

