ವಿಜಯನಗರ: ಅಮಾನತಾದ ಪೊಲೀಸ್ ಕಾನ್ಸ್ಟೇಬಲ್ಗೆ ಸಹಕಾರಿಯಾಗುವಂತೆ ಇಲಾಖಾ ತನಿಖಾ ವಿಚಾರಣೆ ವೇಳೆ ಸುಳ್ಳು ಹೇಳಿದ್ದ ಐವರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಆದೇಶ ಹೊರಡಿಸಿದ್ದಾರೆ.
ಕೊಟ್ಟೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ಗಳಾದ ಕವಿತಾ ಬಾಯಿ, ತಿಪ್ಪಣ್ಣ, ಹೆಚ್ ಬಸವರಾಜ್, ಪತ್ರಿ ಕುಮಾರ್ ಹಾಗೂ ಬಸವರಾಜ ಅಮಾನತುಗೊಂಡವರು.
ಅಕ್ರಮ ಮರಳು ಸಾಗಣೆ ಮಾಡುವವರ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿದರೂ ಪಾಲನೆ ಮಾಡಿಲ್ಲ ಹಾಗೂ ವರ್ಗಾವಣೆ ಮಾಡಿಸುತ್ತೇನೆ ಎಂದು ಪಿಎಸ್ಐಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪದ ಮೇಲೆ ಕೊಟ್ಟೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಕೊಟ್ರಗೌಡ ಅಮಾನತುಗೊಂಡಿದ್ದರು. ಬಳಿಕ ಅವರ ವಿರುದ್ಧ ಡಿವೈಎಸ್ಪಿ ಹಾಲ ಮೂರ್ತಿರಾವ್ ಸಮ್ಮುಖದಲ್ಲಿ ನಡೆದ ಇಲಾಖೆ ವಿಚಾರಣೆಯಲ್ಲಿ ಐವರು ಪೊಲೀಸರು, ಕೊಟ್ರಗೌಡ ಅವರಿಗೆ ಸಹಕಾರಿಯಾಗುವಂತೆ ಸುಳ್ಳು ಹೇಳಿದ್ದರು. ಅಮಾನತುಗೊಂಡ ಕಾನ್ಸ್ಟೇಬಲ್ ಪರವಾಗಿ ನೈಜತೆ ಮುಚ್ಚಿಟ್ಟು ತನಿಖಾಧಿಕಾರಿಗಳ ದಿಕ್ಕು ತಪ್ಪಿಸಿದ್ದರು. ಬಳಿಕ ತನಿಖಾಧಿಕಾರಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಸಭೆಯ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೊಟ್ರಗೌಡ ಅವರು ದುರ್ವರ್ತನೆ ತೋರಿರುವುದು ಗೊತ್ತಾಗಿದೆ. ಸತ್ಯ ಗೊತ್ತಿದ್ದರೂ ಸುಳ್ಳು ಹೇಳಿ ದುರ್ವರ್ತನೆ, ಅಶಿಸ್ತು ತೋರಿದ್ದ ಐವರು ಪೊಲೀಸರನ್ನು ಅಮಾನತಗೊಳಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ.ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

