ತುಮಕೂರು: ಬ್ಯಾಂಕ್ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಪೊಲೀಸ್ ದಂಪತಿ ಅಮಾಯಕರಿಗೆ ಕೊಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತುಮಕೂರಿನ ಜಯನಗರ ಬಡವಾಣೆಯಲ್ಲಿ ಈ ಘಟನೆ ನಡೆದಿದೆ.
ಜಯನಗರ ಬಡವಾಣೆಯಲ್ಲಿ ವಾಸವಾಗಿದ್ದ ಪೊಲೀಸ್ ಪೇದೆ ಮಹೇಶ್ ಹಾಗೂ ಸುಧಾ ದಂಪತಿ, ನಿರುದ್ಯೋಗಿಗಳನ್ನೇ ಟಾರ್ಗೆಟ್ ಮಾಡಿ ವಂಚಿಸಿದ್ದಾರೆ.
ಈ ದಂಪತಿ ಬ್ಯಾಂಕ್ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಹಣ ಪೀಕುತ್ತಿದ್ದರು. ಕಳೆದ 2-3 ವರ್ಷಗಳಿಂದ ಇದೇ ರೀತಿ ವಂಚಿಸುತ್ತಾ ಬಂದಿದ್ದಾರೆ. ನಮಗೆ ಸರ್ಕಾರ ಉನ್ನತ ಹುದ್ದೆಯ ಹಿರಿಯ ಅಧಿಕಾರಿಗಳು ಗೊತ್ತು. ನಿಮಗೆ ಬ್ಯಾಂಕ್ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ, ಅಮಾಯಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಿದ್ದರು.
ಇದೇ ರೀತಿ ಈವರೆಗೂ ಬರೋಬ್ಬರಿ 200 ಜನರಿಂದ ಹಣ ಪೀಕಿದ್ದಾರೆ. ತುಮಕೂರು, ಬೆಂಗಳೂರು, ಹಾಸನ ಸೇರಿದಂತೆ ವಿವಿಧೆಡೆ ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಉಂಡೆನಾಮ ಹಾಕಿದ್ದಾರೆ. ಮಾತನ್ನೇ ಬಂಡವಾಳವಾಗಿ ಮಾಡಿಕೊಂಡು ಯುವಕ-ಯುವತಿಯರಿಗೆ ಪಂಗನಾಮ ಹಾಕಿದ್ದಾರೆ. ಕೆಲಸದ ಕೊಡಿಸುವುದಾಗಿ ನಂಬಿಸಿ, ಖಾಲಿ ಚೆಕ್ ಕೊಟ್ಟು ರಾತ್ರೋರಾತ್ರಿ ಪೊಲೀಸ್ ದಂಪತಿ ಎಸ್ಕೇಪ್ ಆಗಿದ್ದಾರೆ.
ಇದೀಗ ಹಣಕೊಟ್ಟು ಕಳೆದುಕೊಂಡವರು ಜಯನಗರ ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಕರುನಾಡ ವಿಜಯ ಸೇನೆ ನೇತೃತ್ವದಲ್ಲಿ ಖಾಕಿ ದಂಪತಿ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪೇದೆ ಮಹೇಶ್ ತಿಪಟೂರು, ಕೊರಟಗೆರೆ, ಪಾವಗಡ, ತುಮಕೂರು ಠಾಣೆಗಳಲ್ಲಿ ಕೆಲಸ ನಿರ್ವಸಿದ್ದಾರೆ. ಸದ್ಯ ಹಣ ಕಳೆದುಕೊಂಡವರು ಕಂಗಾಲಾಗಿದ್ದು, ನ್ಯಾಯಕ್ಕಾಗಿ ಎಸ್ಪಿ ಮೊರೆ ಹೋಗಿದ್ದಾರೆ.