ಹುಬ್ಬಳ್ಳಿ: ಬಿಲ್ಲವ, ಇಡಿಗ ಸಮುದಾಯ ಸಿಂಧಿ ತಯಾರಿಸುವ ಕುಲ ಕಸಬಿನ ಮೂಲಕ ಸಮಾಜದಲ್ಲಿ ಪರಿಚಿತವಾಗಿರುವ ಸಮಾಜದ ಏಳು ಜನ ಶಾಸಕರು ಹಾಗೂ ಇಬ್ಬರು ಸಚಿವರು ಇದ್ದರೂ ಕೂಡ ಇದುವರೆಗೂ ಒಂದೇ ಒಂದು ಅಭಿವೃದ್ಧಿ ನಿಗಮ ಕೂಡ ಮಾಡಿಲ್ಲ ಎಂದು ಪ್ರಣವಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿಂದು ಉಣಕಲ್ ಬಳಿಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಲ್ಲವ, ಇಡಿಗ ಸಮುದಾಯಕ್ಕೆ ಈಗಾಗಲೇ ಸರ್ಕಾರ ಸಾಕಷ್ಟು ಅನ್ಯಾಯವನ್ನು ಮಾಡಿದ್ದು, ದೊಡ್ಡಮಟ್ಟದ ಜನಸಂಖ್ಯೆಯನ್ನು ಒಳಗೊಂಡಿರುವ ಸಮುದಾಯದ ಅಭಿವೃದ್ಧಿಗೆ ಒಂದೇ ಒಂದು ಅಭಿವೃದ್ಧಿ ನಿಗಮ ಮಾಡಿಲ್ಲ. ಅಲ್ಲದೇ ಇಡಿಗ ಸಮುದಾಯದ ಕುಲ ಕಸುಬು ಆಗಿರುವ ಸಿಂಧಿ ತಯಾರಿಸುವ ಕಾರ್ಯಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ತಡೆಯನ್ನು ತಂದಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ ಎಂದರು.
ಈಗಾಗಲೇ ರಾಜ್ಯ ಸರ್ಕಾರದಲ್ಲಿ ಸುಮಾರು ಏಳು ಜನ ಶಾಸಕರು ಹಾಗೂ ಇಬ್ಬರು ಸಚಿವರು ಇರುವ ಈ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಹಾಗೂ ಐದು ನೂರು ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಇನ್ನೂ ನಮ್ಮ ಸಮುದಾಯದ ಜನರು ಗುಣಮಟ್ಟದ ಹಾಗೂ ಯಾವುದೇ ಮಾದಕ ವಸ್ತುಗಳ ಬಳಕೆಯಿಲ್ಲದ ಸಿಂಧಿ ತಯಾರಿಸುತ್ತಾರೆ. ಈ ನಿಟ್ಟಿನಲ್ಲಿ ಅನುಮತಿ ನೀಡುವ ಮೂಲಕ ಸರ್ಕಾರ ಸೂಕ್ತ ಸರ್ವೇ ಮಾಡಿ ಇಡಿಗ ಸಮುದಾಯದ ಸಾಂಪ್ರದಾಯಿಕತೆಗೆ ಒತ್ತನ್ನು ನೀಡುವ ಕಾರ್ಯವನ್ನು ಮಾಡಬೇಕಿದೆ ಎಂದು ಅವರು ವಿನಂತಿ ಮಾಡಿದರು.